ಮುಂಬೈನಲ್ಲಿ ಅನಿಲ ಸೋರಿಕೆಯ ಆತಂಕ: ಭಯಪಡಬೇಡಿ ಎಂದ ಅಧಿಕಾರಿಗಳು
ಮುಂಬೈ, ಜೂ.7: ಮುಂಬೈನ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿ ಕೆಟ್ಟ ವಾಸನೆಯ ಅನುಭವಕ್ಕೆ ಬರುತ್ತಿದ್ದು, ಅನಿಲ ಸೋರಿಕೆಯಾಗಿರಬಹುದು ಎಂಬ ಶಂಕೆಯಲ್ಲಿ ಜನತೆಯು ದೂರುಗಳನ್ನು ನೀಡಿದ್ದಾರೆ. ನಗರದ ಮಹಾನಗರ ಪಾಲಿಕೆಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.
ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ)ಅಧಿಕಾರಿಗಳು ಜನತೆ ಧೈರ್ಯ ತುಂಬಿದ್ದು, ಕೆಟ್ಟ ವಾಸನೆಯ ಮೂಲ ಪತ್ತೆ ಹಚ್ಚಲು ಅಗ್ನಿಶಾಮಕ ಸೇವೆಯನ್ನು ಬಳಸಿಕೊಂಡಿದೆ.
ಚೆಂಬೂರು, ಘಾಟ್ಕೋಪರ್,ಕಾಂಜೂರ್ಮಾರ್ಗ, ವಿಕ್ರೋಲಿ, ಪೊವಾಯಿ,ಅಂಧೇರಿ ಹಾಗೂ ಮಾಂಕುರ್ಡ್ನ ಜನತೆ ದುರ್ವಾಸನೆಯ ಕುರಿತು ದೂರುಗಳನ್ನು ನೀಡಿದ್ದರು.
"ಚೆಂಬೂರು ಹಾಗೂ ಚಾಂದಿವಲಿಯಲ್ಲಿ ದುರ್ವಾಸನೆಯ ಕುರಿತು ಬಂದಿರುವ ಟ್ವೀಟ್ಗಳು ನಮಗೆ ಲಭಿಸಿವೆ.ಬಿಎಂಸಿ ವಿಪತ್ತು ನಿಯಂತ್ರಣ ಕೊಠಡಿಯು ವಾಸನೆಯ ಮೂಲವನ್ನು ಪತ್ತೆ ಹಚ್ಚಲಿದ್ದು, ಮುಂಬೈ ಅಗ್ನಿಶಾಮಕ ದಳ ಕೂಡ ಕಾರ್ಯಪ್ರವೃತ್ತವಾಗಿದೆ'' ಎಂದು ಮಹಾರಾಷ್ಟ್ರದ ಸಂಪುಟ ಸಚಿವ ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ.
ಗ್ಯಾಸ್ ಸೋರಿಕೆಯ ಪತ್ತೆ ಹಚ್ಚಲು ಮುಂಬೈ ಅಗ್ನಿಶಾಮಕ ದಳ ಹಾಗೂ ಹಿರಿಯ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಡಿಎಂಸಿಆರ್ ಸೋರಿಕೆಯ ಯಾವುದೇ ಸ್ಥಳವನ್ನು ಪತ್ತೆ ಹಚ್ಚಿಲ್ಲ. ಗ್ಯಾಸ್ ಸೋರಿಕೆಯನ್ನು ಕಂಡುಹಿಡಿಯಲು 17 ಅಗ್ನಿಶಾಮಕ ಯಂತ್ರಗಳನ್ನು ನಿಯೋಜಿಸಲಾಗಿದೆ. ಚೆಂಬೂರು, ಮಾಂಕುರ್ಡ್, ಘಾಟ್ಕೋಪರ್, ಅಂಧೇರಿ ಪ್ರದೇಶದ ನಿವಾಸಿಗಳಲ್ಲಿ ಭಯಪಡದಂತೆ ಸೂಚಿಸಲಾಗಿದ್ದು ಮುಖಕ್ಕೆ ಒದ್ದೆ ಟವಲ್ ಅಥವಾ ಕರವಸ್ತ್ರ ಹಾಕಿಕೊಳ್ಳುವಂತೆ ತಿಳಿಸಲಾಗಿದೆ.