ಸರಕಾರಿ, ಖಾಸಗಿ ಆಸ್ಪತ್ರೆಗಳು ದಿಲ್ಲಿ ನಿವಾಸಿಗಳಿಗೆ ಸೀಮಿತ: ಅರವಿಂದ ಕೇಜ್ರಿವಾಲ್
ಹೊಸದಿಲ್ಲಿ, ಜೂ.7: ಹೆಚ್ಚುತ್ತಿರುವ ಕೊರೋನ ವೈರಸ್ ನಿಯಂತ್ರಣಕ್ಕೆ ಬರುವ ತನಕ ರಾಷ್ಟ್ರ ರಾಜಧಾನಿಯಲ್ಲಿರುವ ಸರಕಾರಿ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳು ದಿಲ್ಲಿ ನಿವಾಸಿಗಳಿಗೆ ಮಾತ್ರ ಸೀಮಿತವಾಗಿರುತ್ತವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಘೋಷಿಸಿದರು.
ಕೇಂದ್ರ ಸರಕಾರದ ಅಡಿಯಲ್ಲಿರುವ ಏಮ್ಸ್ ಹಾಗೂ ಸಫ್ದರ್ಜಂಗ್ ಆಸ್ಪತ್ರೆಗಳು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.
ಐದು ಸದಸ್ಯರ ಸಮಿತಿಯು ಪರಿಸ್ಥಿತಿಯನ್ನು ಅವಲೋಕಿಸಿದ್ದು,ಜೂನ್ ಅಂತ್ಯದ ವೇಳೆಗೆ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ನಮಗೆ 15,000 ಹಾಸಿಗೆಗಳ ಬೇಕಾಗುತ್ತವೆ ಎಂದು ಹೇಳಿದೆ. ದಿಲ್ಲಿ ಹಾಗೂ ಕೇಂದ್ರದಿಂದ ನಡೆಸಲ್ಪಡುವ ಆಸ್ಪತ್ರೆಗಳಲ್ಲಿ ತಲಾ 10,000 ಹಾಸಿಗೆಗಳಿವೆ. ದಿಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳನ್ನು ದಿಲ್ಲಿ ನಿವಾಸಿಗಳಿಗೆ ಮಾತ್ರ ಮೀಸಲಿಡಬೇಕೆಂದು ಸಂಪುಟ ನಿರ್ಧರಿಸಿದೆ. ಕೇಂದ್ರ ಸರಕಾರದ ಆಸ್ಪತ್ರೆಗಳು ಎಲ್ಲರಿಗೂ ಚಿಕಿತ್ಸೆ ನೀಡಲಿದೆ. ಖಾಸಗಿ ಆಸ್ಪತ್ರೆಗಳು ಕೂಡ ದಿಲ್ಲಿ ನಿವಾಸಿಗರಿಗೆ ಹಾಸಿಗೆಗಳನ್ನು ಕಾಯ್ದಿರಿಸಬೇಕಾಗುತ್ತದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಕೇಜ್ರಿವಾಲ್ ತಿಳಿಸಿದರು.