ಯುಎಪಿಎ ಅಡಿ ಪ್ರಕರಣ ದಾಖಲಿಸಲ್ಪಟ್ಟಿರುವ ಕಾಶ್ಮೀರದ ಪತ್ರಕರ್ತೆಗೆ ಅಂತರಾಷ್ಟ್ರೀಯ ಪ್ರಶಸ್ತಿ
ಫೋಟೊ ಕೃಪೆ: twitter
ಶ್ರೀನಗರ,ಜೂ.13: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪೋಸ್ಟ್ಗಳಿಗಾಗಿ ಕಳೆದ ತಿಂಗಳು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ತನ್ನ ವಿರುದ್ಧ ಪ್ರಕರಣ ದಾಖಲಿಸಲ್ಪಟ್ಟಿರುವ ಕಾಶ್ಮೀರದ ಫೋಟೊ ಜರ್ನಲಿಸ್ಟ್ ಮಸ್ರತ್ ಝಹ್ರಾ ಅವರು ಕಾಶ್ಮೀರದಲ್ಲಿಯ ಸಂಘರ್ಷದ ತನ್ನ ‘ಹೃದಯಸ್ಪರ್ಶಿ’ ಚಿತ್ರಗಳಿಗಾಗಿ ಪ್ರತಿಷ್ಠಿತ 'ಫೋಟೊ ಜರ್ನಲಿಸಂ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಂಟರ್ನ್ಯಾಷನಲ್ ವಿಮೆನ್ಸ್ ಮೀಡಿಯಾ ಫೌಂಡೇಷನ್ (ಐಡಬ್ಲುಎಂಎಫ್) ನೀಡುವ ಫೋಟೊ ಜರ್ನಲಿಸಂ ಪ್ರಶಸ್ತಿಯಲ್ಲಿ ‘2020 ಅಂಜಾ ನೀಡ್ರಿಂಗಾಸ್ ಕರೇಜ್’ಗಾಗಿ ಝಹ್ರಾ ಅವರನ್ನು ಗುರುವಾರ ಹೆಸರಿಸಲಾಗಿದೆ.
ಅಂಜಾ ನೀಡ್ರಿಂಗಾಸ್ ಕರೇಜ್ ಪ್ರಶಸ್ತಿಯನ್ನು ಪುಲಿಟ್ಝರ್ ಪುರಸ್ಕೃತ ಜರ್ಮನ್ ಮಹಿಳಾ ಫೋಟೊಜರ್ನಲಿಸ್ಟ್ ಅಂಜಾ ನೀಡ್ರಿಂಗಾಸ್ ಅವರ ಗೌರವಾರ್ಥ ಸ್ಥಾಪಿಸಲಾಗಿದೆ. 20,000 ಡಾ.ನಗದು ಬಹುಮಾನವನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ಐಡಬ್ಲ್ಯುಎಂಎಫ್ ಧೈರ್ಯವಂತ ಮಹಿಳಾ ಪತ್ರಕರ್ತರನ್ನು ಉತ್ತೇಜಿಸಲು ಪ್ರತಿವರ್ಷ ನೀಡುತ್ತದೆ.
“ನನ್ನ ಮತ್ತು ಕಠಿಣ ಸನ್ನಿವೇಶಗಳಲ್ಲಿ ಕಾರ್ಯ ನಿರ್ವಹಿಸುವ ಇತರ ಪತ್ರಕರ್ತರ ಸಂಕಷ್ಟಗಳನ್ನು ಜಗತ್ತು ಗುರುತಿಸಿದೆ ಎನ್ನುವುದು ನನಗೆ ಸಂತಸವನ್ನುಂಟು ಮಾಡಿದೆ. ನನ್ನ ವಿರುದ್ಧದ ಪ್ರಕರಣ ಆಘಾತಕಾರಿಯಾಗಿತ್ತು. ಪತ್ರಕರ್ತರು ತೆಗೆಯುವ ಚಿತ್ರಗಳಿಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ. ನಾವು ತೆಗೆಯುವ ಚಿತ್ರಗಳು ಜನರ ಸ್ಥಿತಿಯ ಪುರಾವೆಗಳಾಗಿವೆ. ಅವು ಸತ್ಯವನ್ನು ತೋರಿಸುತ್ತವೆ. ಪ್ರಶಸ್ತಿಗಳು ಮತ್ತು ಮಾನ್ಯತೆಗಳು ಇಡೀ ಪರಿಸ್ಥಿತಿಯನ್ನು ಬದಲಿಸದಿರಬಹುದು,ಆದರೆ ವೃತ್ತಿಪರ ಪತ್ರಕರ್ತರಾಗಿ ನಾವು ಅನುಭವಿಸುತ್ತಿರುವುದನ್ನು ಗುರುತಿಸುವ ಪತ್ರಕರ್ತರ ಸಂಘಗಳು ಇವೆ ಎಂಬ ಭಾವನೆ ನಮ್ಮಲ್ಲಿ ಉಂಟು ಮಾಡುತ್ತವೆ” ಎಂದು ಝಹ್ರಾ(26) ಸುದ್ದಿಸಂಸ್ಥೆಗೆ ತಿಳಿಸಿದರು.
ಅವು ಕನಿಷ್ಠ ನಮ್ಮ ಪರವಾಗಿ ಮಾತನಾಡುತ್ತವೆ ಮತ್ತು ನಮ್ಮ ಪ್ರಕರಣಗಳನ್ನು ಜೀವಂತವಾಗಿರಿಸುತ್ತವೆ ಎಂದರು.
‘ರಾಷ್ಟ್ರವಿರೋಧಿ’ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪದಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಕಳೆದ ಎಪ್ರಿಲ್ನಲ್ಲಿ ಝಹ್ರಾ ಮತ್ತು ಲೇಖಕ ಹಾಗೂ ಹಿರಿಯ ಪತ್ರಕರ್ತ ಗೌಹರ್ ಗೀಲಾನಿ ಅವರ ವಿರುದ್ಧ ಯುಎಪಿಎ ಅಡಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.
ಝಹ್ರಾರನ್ನು ಫೇಸ್ಬುಕ್ ಬಳಕೆದಾರರೆಂದು ಪ್ರಸ್ತಾಪಿಸಿದ್ದ ಪೊಲೀಸರು,ಯುವಜನರನ್ನು ಪ್ರಚೋದಿಸುವ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಅಪರಾಧಗಳನ್ನು ಉತ್ತೇಜಿಸುವ ಕ್ರಿಮಿನಲ್ ಉದ್ದೇಶದ ರಾಷ್ಟ್ರವಿರೋಧಿ ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.