ಮಾತುಕತೆಗಳ ನಂತರ ತನ್ನ ವಶದಲ್ಲಿದ್ದ 10 ಭಾರತೀಯ ಯೋಧರ ಬಿಡುಗಡೆಗೊಳಿಸಿದ ಚೀನಾ
ಹೊಸದಿಲ್ಲಿ: ಸೋಮವಾರ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ ಚೀನಾ ತನ್ನ ವಶಕ್ಕೆ ಪಡೆದುಕೊಂಡಿದ್ದ 10 ಮಂದಿ ಭಾರತೀಯ ಸೈನಿಕರನ್ನು ಗುರುವಾರ ಸಂಜೆ ಬಿಡುಗಡೆಗೊಳಿಸಿದೆ.
ಎರಡೂ ಕಡೆಗಳ ಮೇಜರ್ ಜನರಲ್ ಮಟ್ಟದಲ್ಲಿ ನಡೆದ ಸುದೀರ್ಘ ಮಾತುಕತೆಗಳ ನಂತರ ಸೈನಿಕರನ್ನು ಬಿಡುಗಡೆಗೊಳಿಸಲಾಗಿದೆ. ಈ ಹತ್ತು ಮಂದಿಯಲ್ಲಿ ಇಬ್ಬರು ಮೇಜರ್ ಹಾಗೂ ಇಬ್ಬರು ಕ್ಯಾಪ್ಟನ್ ಗಳಿದ್ದರು. ಸೋಮವಾರದ ಸಂಘರ್ಷದಲ್ಲಿ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಸಹಿತ 20 ಭಾರತೀಯ ಸೈನಿಕರು ಬಲಿಯಾಗಿದ್ದರು.
ಗುರುವಾರ ಸಂಜೆ ಹೇಳಿಕೆ ನೀಡಿದ್ದ ಸೇನೆ, “ಘರ್ಷಣೆಯ ಸಂದರ್ಭ ಯಾವುದೇ ಭಾರತೀಯ ಸೈನಿಕ ನಾಪತ್ತೆಯಾಗಿಲ್ಲ'' ಎಂದು ತಿಳಿಸಿತ್ತು. ಚೀನಾ ವಶದಲ್ಲಿದ್ದ ಸೈನಿಕರ ಬಗ್ಗೆ ಈ ಹೇಳಿಕೆಯಲ್ಲಿ ಯಾವುದೇ ಉಲ್ಲೇಖವಿಲ್ಲದೇ ಇದ್ದರೂ ಅವರ ಬಿಡುಗಡೆ ಖಚಿತಗೊಂಡ ನಂತರವಷ್ಟೇ ಸೇನೆ ಮೇಲಿನ ಹೇಳಿಕೆ ನೀಡಿತ್ತು.
ಗುರುವಾರದಿಂದ ಎರಡೂ ಕಡೆಗಳ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಗಳಲ್ಲಿ ಸೈನಿಕರ ಬಿಡುಗಡೆ ವಿಚಾರವೇ ಪ್ರಮುಖವಾಗಿ ಚರ್ಚೆಯಾಗಿತ್ತು.
ಈ ಮಧ್ಯೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಆನ್ ಶುಕ್ರವಾರ ಹೇಳಿಕೆಯೊಂದನ್ನು ನೀಡಿ ಯಾವುದೇ ಭಾರತೀಯ ಯೋಧರು ತನ್ನ ವಶದಲ್ಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಉಭಯ ರಾಷ್ಟಗಳು ಮಾತುಕತೆಯಲ್ಲಿ ತೊಡಗಿವೆ ಎಂದವರು ತಿಳಿಸಿದ್ದಾರೆ.
‘‘ಗಲ್ವಾನ್ ಕಣಿವೆಯಲ್ಲಿ ತಲೆದೋರಿರುವ ಗಂಭೀರ ಪರಿಸ್ಥಿತಿಯ ಕುರಿತು ಹೇಳುವುದಾದರೆ, ಯಾರದು ತಪ್ಪು ಮತ್ತು ಯಾರದು ಸರಿ ಎಂಬುದು ಇಲ್ಲಿ ಸ್ಪಷ್ಟವಾಗಿ ತಿಳಿದುಬರುತ್ತದೆ. ಬಿಕ್ಕಟ್ಟು ಸಂಪೂರ್ಣ ಹೊಣೆಗಾರಿಕೆಯು ಭಾರತದ ಮೇಲಿದೆ,. ಪರಿಸ್ಥಿತಿಯನ್ನು ಶಮನಗೊಳಿಸಲು ಭಾರತ ಹಾಗೂ ಚೀನಾ ಮಾತುಕತೆ ನಡೆಸುತ್ತಿವೆ ’’ ಎಂದು ಲಿಜಿಆನ್ ತಿಳಿಸಿದ್ದಾರೆ.
ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಘರ್ಷಣೆಯಲ್ಲಿ 76 ಭಾರತೀಯ ಯೋಧರು ಗಾಯಗೊಂಡಿದ್ದು ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ 15 ದಿನಗಳೊಳಗೆ ಕರ್ತವ್ಯಕ್ಕೆ ಮರಳುವ ನಿರೀಕ್ಷೆಯಿದೆ. ಇವರಲ್ಲಿ ಯಾರ ದೇಹಸ್ಥಿತಿಯೂ ಗಂಭೀರವಾಗಿಲ್ಲವೆಂದು ತಿಳಿದುಬಂದಿದೆ.
ಭಾರತೀಯ ಯೋಧರ ಮೇಲೆ ಚೀನಿ ಸೈನಿಕರು ಕಬ್ಬಿಣದ ಸಲಾಖೆಗಳು ಹಾಗೂ ಮೊಳೆಗಳು, ತಂತಿಯ ಕಂಬಿಯ ಸರಿಗೆಗಳನ್ನು ಕಟ್ಟಿದ್ದ ಲಾಠಿಗಳಿಂದ ಹಲ್ಲೆ ನಡೆಸಿದ್ದರು. ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಚೀನಾವು ತನ್ನ ಯೋಧರ ಸಾವು-ನೋವಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಚೀನಾದ ಕನಿಷ್ಠ 45 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಭಾರತದ ಸೇನಾಮೂಲಗಳು ತಿಳಿಸಿವೆ.
1962ರಲ್ಲಿ ಭಾರತ-ಚೀನಾ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಿ ಸೇನೆಯು ಭಾರತೀಯ ಯೋಧರನ್ನು ಬಂಧಿಸಿತ್ತು. 1962ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 30 ಮಂದಿ ಭಾರತೀಯ ಯೋಧರು ವೀರಮರಣವನ್ನಪ್ಪಿದ್ದರು ಹಾಗೂ ಡಜನ್ಗಟ್ಟಳೆ ಸೈನಿಕರನ್ನು ಬಂಧಿಸಲಾಗಿತ್ತು.
ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ಘರ್ಷಣೆಯು, 1967ರಲ್ಲಿ ನಾಥುಲಾದಲ್ಲಿ ಭಾರತ ಹಾಗೂ ಚೀನಾ ನಡುವೆ ನಡೆದ ಕಾಳಗದ ಬಳಿಕ ಉಭಯದೇಶಗಳ ನಡುವೆ ನಡೆದ ಅತಿ ದೊಡ್ಡ ಸಂಘರ್ಷವಾಗಿದೆ. ನಾಥುಲಾ ಘರ್ಷಣೆಯಲ್ಲಿ ಭಾರತದ 80 ಯೋಧರು ಹುತಾತ್ಮರಾಗಿದ್ದರೆ, ಚೀನಾದ 300 ಯೋಧರು ಸಾವನ್ನಪ್ಪಿದ್ದರು.
ಗಲ್ವಾನ್ ಕಣಿವೆಯಲ್ಲಿ ಚೀನಿ ಸೇನಾ ಜಮಾವಣೆ: ಉಪಗ್ರಹ ಚಿತ್ರಗಳಿಂದ ಬಹಿರಂಗ
ಗಲ್ವಾನ್ ಕಣಿವೆಯ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ತನ್ನ ಭಾಗದಲ್ಲಿ ಚೀನಾವು ಭಾರೀ ಸೇನಾ ಜಮಾವಣೆ ಮಾಡುತ್ತಿರುವುದು ಉಪಗ್ರಹ ಚಿತ್ರಗಳಿಂದ ಬಹಿರಂಗವಾಗಿದೆ. ಚೀನಾವು ಸೇನಾ ಜಮಾವಣೆ ನಡೆಸುತ್ತಿರುವ ಸ್ಥಳವು ಭಾರತದ ನೆಲೆಗಳಿಂದ ಕೇವಲ ಒಂದು ಕಿ.ಮೀ. ಅಂತರದಲ್ಲಿದೆಯೆಂದು ಮೂಲಗಳು ತಿಳಿಸಿವೆ.
ಜೂನ್ 15ರಂದು ಉಭಯದೇಶಗಳ ಸೈನಿಕರ ನಡುವೆ ಭಾರೀ ಘರ್ಷಣೆ ನಡೆದ ಬಳಿಕವೂ ಚೀನಾವು ತನ್ನ ಪಡೆಗಳನ್ನು ಪ್ರದೇಶದಿಂದ ಹಿಂದೆ ಸರಿಯುತ್ತಿರುವ ಯಾವುದೇ ಸೂಚನೆಗಳು ಕಂಡುಬಂದಿಲ್ಲ. ಗಲ್ವಾನ್ನ ಎಲ್ಎಸಿಯ ಸಮೀಪವೇ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದು ಉಪಗ್ರಹ ಛಾಯಾಚಿತ್ರಗಳಿಂದ ಕಂಡುಬಂದಿದೆ.