ಆಂಧ್ರಪ್ರದೇಶ: ಕಾರ್ಖಾನೆಯಲ್ಲಿ ಅನಿಲ ಸೋರಿಕೆ, ಓರ್ವ ಮೃತ್ಯು
ನಂದ್ಯಾಲ್,ಜೂ.27: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಂದ್ಯಾಲ್ ಪಟ್ಟಣದಲ್ಲಿರುವ ಎಸ್ಪಿವೈ ಆಗ್ರೊ ಇಂಡಸ್ಟೀಸ್ನಲ್ಲಿ ಶನಿವಾರ ಅಮೋನಿಯಾ ಅನಿಲ ಸೋರಿಕೆಯಾದ ಪರಿಣಾಮ ಕಂಪನಿಯ ಅಧಿಕಾರಿಯೋರ್ವರು ಮೃತಪಟ್ಟಿದ್ದಾರೆ.
ಕಂಪನಿಯ ಜನರಲ್ ಮ್ಯಾನೇಜರ್ ಶ್ರೀನಿವಾಸ ರಾವ್ ಮೃತ ವ್ಯಕ್ತಿ. ದುರಂತ ಸಂಭವಿಸಿದಾಗ ಅವರೊಂದಿಗಿದ್ದ ಇತರ ನಾಲ್ವರು ಅಲ್ಲಿಂದ ಹೊರಗೆ ಓಡಿ ಪಾರಾಗಿದ್ದಾರೆ.
ಅನಿಲ ಸೋರಿಕೆಯನ್ನು ನಿಲ್ಲಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಕಾರ್ಖಾನೆಯ ಸುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಯಾವುದೇ ಅಪಾಯವಿಲ್ಲ. ಆತಂಕಗೊಳ್ಳದಂತೆ ಮತ್ತು ಮನೆಯೊಳಗೇ ಇರುವಂತೆ ಜನರಿಗೆ ಸೂಚಿಸಲಾಗಿದೆ ಎಂದು ಕರ್ನೂಲು ಜಿಲ್ಲಾಧಿಕಾರಿ ಜಿ.ವೀರಪಾಂಡಿಯನ್ ತಿಳಿಸಿದರು.
ಕಾರ್ಖಾನೆಯು ಮಾಜಿ ಶಾಸಕ ಎಸ್.ಪಿ.ವೈ.ರೆಡ್ಡಿ ಅವರ ಕುಟುಂಬದ ಒಡೆತನಕ್ಕೆ ಸೇರಿದ್ದಾಗಿದ್ದು,ಅನಿಲ ಸೋರಿಕೆಯಾದ ಪೈಪ್ಲೈನ್ನ್ನು ಶುಕ್ರವಾರವಷ್ಟೇ ದುರಸ್ತಿ ಮಾಡಲಾಗಿತ್ತು ಎನ್ನಲಾಗಿದೆ.
Next Story