ರಸ್ತೆ ಬದಿ ತರಕಾರಿ ಮಾರುತ್ತಿರುವ ರಾಷ್ಟ್ರಮಟ್ಟದ ಕ್ರೀಡಾಪಟು
ರಾಂಚಿ, ಜೂ.30: ರಾಷ್ಟ್ರಮಟ್ಟದ ಕ್ರೀಡಾಪಟು ಜಾರ್ಖಂಡ್ನ ಗೀತಾಕುಮಾರಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್ಡೌನ್ನಿಂದ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಜೀವನ ನಿರ್ವಹಣೆಗೆ ಬೀದಿಬದಿಯಲ್ಲಿ ತರಕಾರಿ ಮಾರುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ಪಡೆದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ತಕ್ಷಣ ಕ್ರೀಡಾಪಟುವಿನ ಕಷ್ಟಕ್ಕೆ ಸ್ಪಂದಿಸಿ 50,000 ರೂ. ಆರ್ಥಿಕ ನೆರವನ್ನು ತಕ್ಷಣ ನೀಡುವಂತೆ ರಾಮಗಢ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಅಲ್ಲದೆ ಸರಕಾರದ ವತಿಯಿಂದ ಮಾಸಿಕ 3,000 ರೂ. ಸ್ಟೈಪೆಂಡ್ ಒದಗಿಸುವುದಾಗಿ ಘೋಷಿಸಿದ್ದು ಕ್ರೀಡಾಕೇಂದ್ರವೊಂದರಲ್ಲಿ ಆಕೆಯ ತರಬೇತಿಗೆ ವ್ಯವಸ್ಥೆ ಮಾಡಿದ್ದಾರೆ. ಗೀತಾ ಕುಮಾರಿ ರಾಜ್ಯಮಟ್ಟದ ನಡಿಗೆ ಸ್ಪರ್ಧೆಯಲ್ಲಿ 8 ಚಿನ್ನದ ಪದಕ ಮತ್ತು ಕೋಲ್ಕತಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಹಝಾರಿಬಾಗ್ನ ಆನಂದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿರುವ ಗೀತಾ ಬಡಕುಟುಂಬದಿಂದ ಬಂದವರು. ಇದೀಗ ಸರಕಾರದ ನೆರವಿನಿಂದ ತನ್ನ ನೆಚ್ಚಿನ ಕ್ರೀಡೆಯಲ್ಲಿ ಇನ್ನಷ್ಟು ಸಾಧಿಸಬಹುದಾಗಿದೆ ಎಂದು ಗೀತಾಳ ಸೋದರಮಾವ ಧನಂಜಯ ಪ್ರಜಾಪತಿ ಹೇಳಿದ್ದಾರೆ.