ವಿಕಾಸ್ ದುಬೆ ಗ್ಯಾಂಗ್ಗೆ ಶಾಕ್ ನೀಡಿದ ಎಸ್ಟಿಎಫ್
ವಿಕಾಸ್ ದುಬೆ
ಕಾನ್ಪುರ, ಜು.9: ವಾರದ ಹಿಂದೆ ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆ ಗ್ಯಾಂಗ್ನ ಬೇಟೆ ಮುಂದುವರಿಸಿರುವ ಪೊಲೀಸರು ಆರು ಗಂಟೆಗಳಲ್ಲಿ ಎರಡನೇ ಎನ್ಕೌಂಟರ್ ನಡೆಸಿ ವಿಕಾಸ್ ದುಬೆಯ ಅಳಿಯನನ್ನು ಕೊಂದಿದ್ದಾರೆ. ವಿಕಾಸ್ ದುಬೆಯ ಸಹಚರ ಹಾಗೂ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದಟ್ಟ ಅರಣ್ಯ ಪ್ರದೇಶದಲ್ಲಿ ಹುದುಗಿಸಿ ಇಟ್ಟಿರುವ ಶಸ್ತ್ರಾಸ್ತ್ರಗಳ ಶೋಧ ಕಾರ್ಯಾಚರಣೆ ವೇಳೆ ಪೊಲೀಸರತ್ತ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಸಹಚರರನ್ನು ಬಂಧಿಸಲಾಗಿದೆ.
ಬಳಿಕ ದುಬೆಯ ಭಾವ ಹಾಗೂ ಬಾಲ್ಯಸ್ನೇಹಿತ ರಾಜು ಖುಲ್ಲಾರ್ ಅಲಿಯಾಸ್ ಗಜೇಂದ್ರ ಎಂಬಾತನನ್ನು ಮಧ್ಯಪ್ರದೇಶದ ಶಾಧೋಲ್ನಲ್ಲಿ ಎಸ್ಟಿಎಫ್ ತಂಡ ಸೆರೆ ಹಿಡಿದಿದೆ. ಖುಲ್ಲರ್ನ ಮಗ ಆದರ್ಶ್ನನ್ನು ಒಂದು ದಿನ ಹಿಂದೆಯೇ ಸೆರೆ ಹಿಡಿಯಲಾಗಿತ್ತಾದರೂ, ತಂದೆಯ ಬಂಧನದವರೆಗೆ ಇದನ್ನು ಬಹಿರಂಗಪಡಿಸಿರಲಿಲ್ಲ.
ವಿಕಾಸ್ ದುಬೆಯ ಅಳಿಯ ಹಾಗೂ ಅಂಗರಕ್ಷಕನಾಗಿದ್ದ ಅಮರ್ ದುಬೆಯನ್ನು ಮಧ್ಯಪ್ರದೇಶ ಗಡಿಯ ಹಮೀರ್ಪುರದಲ್ಲಿ ನಡೆದ ಶೂಟೌಟ್ನಲ್ಲಿ ಹತ್ಯೆ ಮಾಡಲಾಗಿದೆ. ಹರ್ಯಾಣದ ಫರೀದಾಬಾದ್ನಲ್ಲಿ ಮಂಗಳವಾರ ರಾತ್ರಿ ವಿಕಾಸ್ ದುಬೆ ಗ್ಯಾಂಗ್ನ ಮೂವರನ್ನು ಸೆರೆ ಹಿಡಿಯಲಾಗಿದ್ದು, ಅವರು ನೀಡಿದ ಸುಳಿವಿನ ಆಧಾರದಲ್ಲಿ ಅಮರ್ನ ಇರುವಿಕೆಯನ್ನು ಪೊಲೀಸರು ಪತ್ತೆ ಮಾಡಿದ್ದರು.
ಅಮರ್ ದುಬೆ ಕೇವಲ ಒಂಬತ್ತು ದಿನಗಳ ಹಿಂದಷ್ಟೇ ವಿವಾಹವಾಗಿದ್ದ. ಪೊಲೀಸರ ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಗುಂಡಿಕ್ಕಿ ಕೊಲ್ಲಲು ಆತನ ಪತ್ನಿಯ ಮನೆಯವರು ಒಪ್ಪಿಗೆ ನೀಡಿದ್ದರು. ಅಮರ್ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಅಮರ್ ಹಾಗೂ 14 ಮಂದಿ ಸಹಚರರ ಪೋಸ್ಟರ್ಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದರು.