ದಿಲ್ಲಿಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾದ ಸಚಿನ್ ಪೈಲಟ್: ವರದಿ
ಕಾಂಗ್ರೆಸ್ ನಾಯಕರ ಸಭೆಗೆ ಗೈರಾಗುವ ಸಾಧ್ಯತೆ
ಫೈಲ್ ಚಿತ್ರ
ಹೊಸದಿಲ್ಲಿ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಅಸಮಾಧಾನ ಹೊಂದಿರುವ ಡಿಸಿಎಂ ಸಚಿನ್ ಪೈಲಟ್ ದಿಲ್ಲಿಯಲ್ಲಿ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ
ರಾಜಸ್ಥಾನದ ರಾಜಕೀಯ ಬೆಳವಣಿಗೆಗಳ ಬಗ್ಗೆ ಈ ಇಬ್ಬರು ನಾಯಕರ ನಡುವೆ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಯಿತು ಎಂದು ಮೂಲಗಳು ತಿಳಿಸಿದ್ದಾಗಿ indiatoday.in ವರದಿ ಮಾಡಿದೆ.
ಇದಕ್ಕೂ ಮೊದಲು ಜೈಪುರಕ್ಕೆ ಆಗಮಿಸುವಂತೆ ಮತ್ತು ಹಿರಿಯ ನಾಯಕರೊಂದಿಗಿನ ಸಭೆಯಲ್ಲಿ ಭಾಗವಹಿಸುವಂತೆ ಸಚಿನ್ ಪೈಲಟ್ ರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತ್ತು. ಈ ಮಾತುಕತೆಗಾಗಿ ದಿಲ್ಲಿಯ ನಾಯಕ ಅಜಯ್ ಮಕೇನ್, ರಾಜಸ್ಥಾನ ಕಾಂಗ್ರೆಸ್ ಪ್ರದೇಶ ಸಮಿತಿ ಮುಖ್ಯಸ್ಥ ಅವಿನಾಶ್ ಪಾಂಡೆ ಮತ್ತು ಹಿರಿಯ ವಕ್ತಾರ ರಣದೀಪ್ ಸುರ್ಜೆವಾಲರನ್ನು ನೇಮಿಸಿತ್ತು.
ಈಗಾಗಲೇ ಸಿಂಧಿಯಾ ಜೊತೆ ಪೈಲಟ್ ಮಾತುಕತೆ ನಡೆಸಿದ್ದು, ಮುಂದಿನ ಯಾವುದೇ ಸಭೆಗಳಲ್ಲಿ ಭಾಗವಹಿಸುವ ಯೋಜನೆಯಿಲ್ಲ. ಈಗಾಗಲೇ ಸಿಂಧಿಯಾ ಸಚಿನ್ ರನ್ನು ಸಾರ್ವಜನಿಕವಾಗಿ ಬೆಂಬಲಿಸುವ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಜೈಪುರದಲ್ಲಿ ನಡೆಯಲಿರುವ ಸಭೆಗೆ ಪೈಲಟ್ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.