ಮೂರು ಆಸ್ಪತ್ರೆಗಳಿಂದ ಚಿಕಿತ್ಸೆ ನಿರಾಕರಣೆ ಆರೋಪ: 18 ವರ್ಷದ ಯುವಕ ಕೊರೋನಗೆ ಬಲಿ
ಕೊಲ್ಕತ್ತಾ, ಜು.12: ಕೋವಿಡ್-19 ಸೋಂಕಿಗೆ ಚಿಕಿತ್ಸಾ ಸೌಲಭ್ಯ ಇರುವ ಮೂರು ಕಡೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಮ್ಮ 18 ವರ್ಷ ವಯಸ್ಸಿನ ಮಧುಮೇಹ ರೋಗವಿದ್ದ ಮಗ ಮೃತಪಟ್ಟಿದ್ದಾನೆ ಎಂದು ಯುವಕನ ಪೋಷಕರು ಆಪಾದಿಸಿದ್ದಾರೆ.
ಹನ್ನೆರಡನೇ ತರಗತಿ ವಿದ್ಯಾರ್ಥಿಯಾಗಿದ್ದ ಶುಭ್ರಜೀತ್ ಚೌಧರಿಯನ್ನು ಕೊಲ್ಕತ್ತಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲೂ ದಾಖಲಿಕೊಳ್ಳಲು ನಿರಾಕರಿಸಲಾಗಿತ್ತು. ಆದರೆ ಚಿಕಿತ್ಸೆ ನೀಡದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವಕನ ತಾಯಿ ಬೆದರಿಕೆ ಹಾಕಿದ ಬಳಿಕವಷ್ಟೇ ಯುವಕನನ್ನು ದಾಖಲಿಸಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸುವುದಾಗಿ ಆರೋಗ್ಯಸೇವೆಗಳ ನಿರ್ದೇಶಕ ಅಜಯ್ ಚಕ್ರಬರ್ತಿ ಹೇಳಿದ್ದಾರೆ.
‘‘ಆತ ಬಾಲ್ಯದಿಂದಲೇ ಮಧುಮೇಹ ರೋಗಿಯಾಗಿದ್ದು, ಉಸಿರಾಟದ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಕಮರ್ಹತಿ ಇಎಸ್ ಆಸ್ಪತ್ರೆಗೆ ಕರೆದೊಯ್ದಿದ್ದೆವು. ಆದರೆ ಇಲ್ಲಿ ಐಸಿಯುನಲ್ಲಿ ಬೆಡ್ ಇಲ್ಲ ಎಂಬ ಕಾರಣಕ್ಕೆ ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು. ಬಳಿಕ ಒಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಕೋವಿಡ್-19 ಪರೀಕ್ಷೆ ಮಾಡಿದಾಗ ಪಾಸಿಟಿವ್ ಫಲಿತಾಂಶ ಬಂತು. ಅಲ್ಲೂ ಬೆಡ್ ಖಾಲಿ ಇಲ್ಲ ಎಂದು ವಾಪಸ್ ಕಳುಹಿಸಿದರು. ಬಳಿಕ ಸಾಗರ್ ದತ್ತಾ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಎಂಸಿಎಚ್ಗೆ ದಾಖಲಿಸಲು ಪೊಲೀಸರು ಸಲಹೆ ಮಾಡಿದರು’’ ಎಂದು ತಂದೆ ಆರೋಪಿಸಿದ್ದಾರೆ.