ಗೋವು ಕಳ್ಳರೆಂದು ಆರೋಪಿಸಿ ಮೂವರು ಬಾಂಗ್ಲಾದೇಶಿ ಪ್ರಜೆಗಳ ಥಳಿಸಿ ಹತ್ಯೆ
ದಿಸ್ಪುರ, ಜು. 19: ಗೋವು ಕಳವುಗೈಯಲು ಗಡಿ ದಾಟಿದ್ದಾರೆ ಎಂದು ಆರೋಪಿಸಿ ಮೂವರು ಬಾಂಗ್ಲಾದೇಶಿ ಪ್ರಜೆಗಳನ್ನು ಥಳಿಸಿ ಹತ್ಯೆಗೈದ ಘಟನೆ ರವಿವಾರ ಅಸ್ಸಾಂನ ಕರೀಮ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಪಥಾರ್ಕಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬೊಗ್ರಿಜಾನ್ ಚಹಾ ತೋಟದಲ್ಲಿ ಈ ಘಟನೆ ನಡೆದಿದೆ ಎಂದು ಜಿಲ್ಲೆಯ ಪೊಲೀಸ್ ಅಧೀಕ್ಷಕ ಕುಮಾರ್ ಸಂಜಿತ್ ಕೃಷ್ಣ ತಿಳಿಸಿದ್ದಾರೆ.
ಬೊಗ್ರಿಜಾನ್ ಪ್ರದೇಶದಿಂದ ಗೋವುಗಳನ್ನು ಕಳುವುಗೈಯುವ ಉದ್ದೇಶದಿಂದ ಬಾಂಗ್ಲಾದೇಶಿ ಪ್ರಜೆಗಳು ಗಡಿ ದಾಟಿದ್ದಾರೆ. ಅವರನ್ನು ಸ್ಥಳೀಯರು ಥಳಿಸಿ ಹತ್ಯೆಗೈದಿದ್ದಾರೆ. ಹಲ್ಲೆ ನಡೆಸಿದವರನ್ನು ಇನ್ನಷ್ಟೇ ಗುರುತಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶಿ ಪ್ರಜೆಗಳಲ್ಲಿ ಹಗ್ಗ, ಬ್ಯಾಗ್, ವಯರ್, ತಂತಿ ಬೇಲಿ ತುಂಡರಿಸುವ ಸಾಧನ ಮೊದಲಾದ ವಸ್ತುಗಳು ಪತ್ತೆಯಾಗಿದೆ. ಮೂವರು ಬಾಂಗ್ಲಾದೇಶಿ ಪ್ರಜೆಗಳ ಮೃತದೇಹಗಳನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕೃಷ್ಣಾ ತಿಳಿಸಿದ್ದಾರೆ
Next Story