ಅತ್ಯಾಚಾರ ಸಂತ್ರಸ್ತೆ ಮತ್ತಾಕೆಯ ತಾಯಿಯನ್ನು ಟ್ರ್ಯಾಕ್ಟರ್ ಹರಿಸಿ ಸಾಯಿಸಿದ ಆರೋಪಿ!
ಲಕ್ನೋ : ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಮತ್ತಾಕೆಯ ತಾಯಿಯ ಮೇಲೆ ಪ್ರಕರಣದ ಆರೋಪಿ ಟ್ರ್ಯಾಕ್ಟರ್ ಹರಿಸಿ ಕೊಂದ ಘಟನೆ ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯ ಅಮಪುರ್ ಎಂಬಲ್ಲಿ ನಡೆದಿದೆ. ಆರೋಪಿ ಯಶ್ವೀರ್ ಎಂಬಾತನನ್ನು ಘಟನೆ ನಡೆದ ಮರುದಿನವೇ ಪೊಲೀಸರು ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆ ಮತ್ತಾಕೆಯ ತಾಯಿ ಮಾರ್ಕೆಟ್ಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಘಟನೆ ನಡೆದಿದೆ. ಆರೋಪಿ ಯಶ್ವಂತ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಆರೋಪಿಯ ಕುಟುಂಬ ಮತ್ತು ಸಂತ್ರಸ್ತೆಯ ಕುಟುಂಬದ ನಡುವೆ ಇದ್ದ ಕಲಹದ ಕಾರಣ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಹಿಂದೆ ಯಶ್ವೀರ್ ತಂದೆ ಮಹಾವೀರ್ ರಜಪೂತ್ ಕೊಲೆ ನಡೆದ ನಂತರ ಸಂತ್ರಸ್ತೆಯ ತಂದೆ ಹಾಗೂ ಮಾವನನ್ನು ಬಂಧಿಸಲಾಗಿತ್ತು. ಸಂತ್ರಸ್ತೆಯ ತಂದೆ ಜೈಲಿನಲ್ಲಿದ್ದ ಸಂದರ್ಭ ಸಂತ್ರಸ್ತೆ ಮತ್ತಾಕೆಯ ತಾಯಿ ಮಹಾವೀರ್ ಪುತ್ರ ಯಶ್ವೀರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ನಂತರ ಆತನ ಬಂಧನವಾಗಿತ್ತು. ಇತ್ತೀಚೆಗಷ್ಟೇ ಆತ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ತನ್ನ ತಂದೆಯ ಕೊಲೆಗೆ ಪ್ರತೀಕಾರವಾಗಿ ಆತ ಅವರಿಬ್ಬರನ್ನು ಟ್ರ್ಯಾಕ್ಟರ್ ಹರಿಸಿ ಕೊಂದಿದ್ದಾನೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಘಟನೆ ನಡೆದ ಬೆನ್ನಿಗೇ ಆಕ್ರೋಶಭರಿತ ಗ್ರಾಮಸ್ಥರು ಇಬ್ಬರ ಕಳೇಬರಗಳನ್ನೂ ರಸ್ತೆ ಮೇಲಿರಿಸಿ ಪ್ರತಿಭಟನೆ ನಡೆಸಿ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದರು. ಮರುದಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.