ಫೈಝಲ್ ಫಾರೂಖ್ ಜಾಮೀನು ರದ್ದು ಕೋರಿ 2ನೆ ಅಪೀಲು ಸಲ್ಲಿಸಿದ ದಿಲ್ಲಿ ಪೊಲೀಸರಿಗೆ ಹೈಕೋರ್ಟ್ ತರಾಟೆ
‘ನ್ಯಾಯಾಂಗ ವ್ಯವಸ್ಥೆಯ ದುರುಪಯೋಗ'
ಹೊಸದಿಲ್ಲಿ: ಈ ವರ್ಷದ ಫೆಬ್ರವರಿಯಲ್ಲಿ ರಾಜಧಾನಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಕುರಿತಂತೆ ಆರೋಪಿ ಫೈಝಲ್ ಫಾರೂಕ್ ಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ದಿಲ್ಲಿ ಪೊಲೀಸರು ಸಲ್ಲಿಸಿದ್ದ ಹೊಸ ಅಪೀಲನ್ನು ದಿಲ್ಲಿ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಈ ಹಿಂದೆ ದಿಲ್ಲಿ ಪೊಲೀಸರು ಸಲ್ಲಿಸಿರುವ ಇದೇ ಉದ್ದೇಶದ ಅಪೀಲಿನ ಮೇಲಿನ ತೀರ್ಪು ಈಗಾಗಲೇ ಬಾಕಿಯಿದೆ ಎಂಬ ಕಾರಣಕ್ಕೆ ಹೊಸ ಅಪೀಲನ್ನು ನ್ಯಾಯಾಲಯ ರದ್ದುಗೊಳಿಸಿದೆಯಲ್ಲದೆ, ದಿಲ್ಲಿ ಪೊಲೀಸರು ಅನಗತ್ಯ ಪ್ರತ್ಯೇಕ ಅಪೀಲು ಸಲ್ಲಿಸಿರುವ ಕುರಿತಂತೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
“ದಿಲ್ಲಿ ಪೊಲೀಸರು ನ್ಯಾಯಾಂಗ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಹಾಗೂ ವ್ಯವಸ್ಥೆಯನ್ನೇ ಮೋಸಗೊಳಿಸಲು ಯತ್ನಿಸುತ್ತಿದ್ದಾರೆ” ಎಂದು ಅಪೀಲು ರದ್ದುಗೊಳಿಸುವ ಸಂದರ್ಭ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಹೇಳಿದರು.
ಈ ಹಿಂದೆ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿ ಜೂನ್ 20ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಈಗಾಗಲೇ ಅಪೀಲು ಸಲ್ಲಿಕೆಯಾಗಿರುವುದರಿಂದ ಹೊಸದಾಗಿ ಸಲ್ಲಿಸಲಾಗಿರುವ ಅಪೀಲನ್ನು ಸ್ವೀಕರಿಸಲು ಸಾಧ್ಯವಿಲ್ಲ ಹಾಗೂ ಅದೇ ಕಾರಣಕ್ಕೆ ರದ್ದುಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಹೇಳಿದ್ದರು.
ಮೊದಲಿನ ಅಪೀಲನ್ನು ಸರಕಾರದ ಪರವಾಗಿ ವಕೀಲ ಅಮಿತ್ ಮಹಾಜನ್ ಅವರ ಮೂಲಕ ಸಲ್ಲಿಸಲಾಗಿತ್ತು. ಕೇಂದ್ರ ಸರಕಾರದ ವಕೀಲರಾಗಿರುವ ಮಹಾಜನ್ ತಮಗೆ ಅಪೀಲು ಸಲ್ಲಿಸುವ ಅಧಿಕಾರವನ್ನು ದಿಲ್ಲಿ ಪೊಲೀಸರು ನೀಡಿದ್ದಾರೆ ಎಂದು ಹೇಳಿಕೊಂಡಿದ್ದರು. ಈ ಅಪೀಲಿನ ಮೇಲಿನ ತೀರ್ಪು ವಿಚಾರಣೆಗೆ ಬಾಕಿಯಿದೆ ಹಾಗೂ ಆರೋಪಿಯ ಪ್ರತಿಕ್ರಿಯೆಯನ್ನೂ ನ್ಯಾಯಾಲಯ ಕೇಳಿತ್ತು. ಈ ನಡುವೆ ಹೊಸದಾಗಿ ಅಪೀಲನ್ನು ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್ ಪ್ರಸಾದ್ ಮೂಲಕ ಸಲ್ಲಿಸಲಾಗಿತ್ತು. ತಮ್ಮನ್ನು ಲೆಫ್ಟಿನೆಂಟ್ ಗವರ್ನರ್ ಅವರು ನೇಮಿಸಿದ್ದಾರೆಂದು ಅಮಿತ್ ಪ್ರಸಾದ್ ಹೇಳಿಕೊಂಡಿದ್ದರು.