ಚುನಾವಣಾ ಆಯೋಗ-ಬಿಜೆಪಿ ಸಂಪರ್ಕದ ಆರೋಪ: ಪ್ರಚಾರ ಸಂಸ್ಥೆಯನ್ನು ತಾನು ನೇಮಿಸಿಲ್ಲ ಎಂದ ಮಹಾರಾಷ್ಟ್ರ ಸಿಇಒ
ಮುಂಬೈ, ಜು.25: 2019ರಲ್ಲಿ ಚುನಾವಣೆಗೆ ಸಂಬಂಧಿಸಿದ ಆನ್ಲೈನ್ ಜಾಹೀರಾತು ನಿರ್ವಹಿಸುವ ಗುತ್ತಿಗೆ ಪಡೆದ ಸಂಸ್ಥೆಯನ್ನು ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಮಹಾನಿರ್ದೇಶನಾಲಯ ನೇಮಿಸಿತ್ತು ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಬಲದೇವ್ ಸಿಂಗ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ವರ್ಷ ನಡೆದಿದ್ದ ಚುನಾವಣೆ ಸಂದರ್ಭ, ಬಿಜೆಪಿ ಯುವ ಘಟಕದ ಐಟಿ ಮತ್ತು ಸಾಮಾಜಿಕ ಮಾಧ್ಯಮದ ರಾಷ್ಟ್ರೀಯ ಸಂಯೋಜಕ ದೇವಾಂಗ್ ದಾವೆ ಮಾಲಕತ್ವದ ಜಾಹೀರಾತು ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಯನ್ನು ಚುನಾವಣೆಗೆ ಸಂಬಂಧಿಸಿದ ಆನ್ಲೈನ್ ಕಾರ್ಯ ನಿರ್ವಹಿಸಲು ಬಲದೇವ್ ಸಿಂಗ್ ನೇಮಿಸಿದ್ದರು ಎಂದು ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಗುರುವಾರ ಸರಣಿ ಟ್ವೀಟ್ ಮೂಲಕ ಆರೋಪಿಸಿದ್ದರು. ಸಂಸ್ಥೆ ವಿಷಯಕ್ಕೆ ಸಂಬಂಧಿಸಿ ವರದಿ ಸಲ್ಲಿಸುವಂತೆ ಭಾರತದ ಚುನಾವಣಾ ಆಯೋಗ ಸಿಂಗ್ಗೆ ಸೂಚಿಸಿತ್ತು.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಂಗ್, ರಾಜಕೀಯ ಕಾರಣಕ್ಕೆ ತಾನು ಸಂಸ್ಥೆಗೆ ಗುತ್ತಿಗೆ ನೀಡಿದ್ದೆ ಎಂಬ ಆರೋಪ ಸುಳ್ಳು ಮತ್ತು ದಾರಿ ತಪ್ಪಿಸುವಂತದ್ದು. ನಿಯಮದ ಪ್ರಕಾರ, ಮಹಾರಾಷ್ಟ್ರ ಸರಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಮಹಾನಿರ್ದೇಶನಾಲಯವು ಚುನಾವಣಾ ಜಾಗೃತಿ ಅಭಿಯಾನ ನಡೆಸಲು ಸಂಸ್ಥೆಯೊಂದನ್ನು ನೇಮಿಸಿದೆ . ಚಾಲ್ತಿಯಲ್ಲಿರುವ ನಿಯಮ ಮತ್ತು ಕಾರ್ಯವಿಧಾನವನ್ನು ಪಾಲಿಸಿ ಈ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ಸಿಂಗ್ ವರದಿ ಸಲ್ಲಿಸಿದ್ದಾರೆ.