ಪಕ್ಷ ವಿಪ್ ಜಾರಿಗೊಳಿಸಿದರೆ ಅಧಿವೇಶನದಲ್ಲಿ ಭಾಗವಹಿಸುತ್ತೇವೆ ಎಂದ ಸಚಿನ್ ಪೈಲಟ್ ಬಣದ ಶಾಸಕ
ಸಚಿನ್ ಪೈಲಟ್
ಜೈಪುರ್: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರಿಗೆ ನಿಷ್ಠರಾಗಿದ್ದಾರೆನ್ನಲಾದ ಶಾಸಕರ ಪೈಕಿ ಒಬ್ಬರಾಗಿರುವ ವಲ್ಲಭನಗರ ಕ್ಷೇತ್ರದ ಶಾಸಕ ಗಜೇಂದ್ರ ಸಿಂಗ್ ಶಕ್ತಾವತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪಕ್ಷ ವಿಪ್ ಜಾರಿಗೊಳಿಸಿದಲ್ಲಿ ತಾವು ಹಾಗೂ ಪೈಲಟ್ ಬಣದ ಇತರ ಶಾಸಕರು ಆಗಸ್ಟ್ 14ರಂದು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಲು ಸಿದ್ಧ ಎಂದಿದ್ದಾರೆ.
ಪೈಲಟ್ ಬಣದ 18 ಶಾಸಕರ ಪೈಕಿ ಒಬ್ಬರಾಗಿರುವ ಶಕ್ತಾವತ್ ಸುದ್ದಿ ಸಂಸ್ಥೆಯೊಂದರ ಜತೆ ಈ ಕುರಿತು ಮಾತನಾಡಿದ್ದಾರೆ. ``ನಾವು ಸಚಿನ್ ಪೈಲಟ್ ಅವರ ಜತೆಗಿದ್ದೇವೆ ಹಾಗೂ ಅವರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧರಾಗಿರುತ್ತೇವೆ. ನಾವು ಯಾವತ್ತೂ ಕಾಂಗ್ರೆಸ್ ತೊರೆಯುವ ಕುರಿತು ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷ ವಿಪ್ ಜಾರಿಗೊಳಿಸಿದರೆ ನಾನು ಖಂಡಿತಾ ಸದನದ ಅಧಿವೇಶನದಲ್ಲಿ ಭಾಗವಹಿಸುತ್ತೇನೆ. ಪಕ್ಷದೊಳಗೆ ಇದ್ದುಕೊಂಡೇ ನಮ್ಮ ದನಿ ಎತ್ತುತ್ತೇವೆ,'' ಎಂದಿದ್ದಾರೆ.
ಪಕ್ಷದ ವಿಪ್ ಸದನದೊಳಗಡೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಇತರ ಸಭೆಗಳಿಗಲ್ಲ ಎಂದೂ ಅವರು ಹೇಳಿದ್ದಾರೆ.
ಬಂಡಾಯ ಶಾಸಕರು ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಎರಡು ಸಭೆಗಳಿಗೆ ಗೈರಾಗಿದ್ದಾರೆ.