ವಿಶಾಖಪಟ್ಟಣ: ಕ್ರೇನ್ ಉರುಳಿ ಬಿದ್ದು 11 ಕಾರ್ಮಿಕರು ಸಾವು
ಅಮರಾವತಿ, ಆ.1: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಿಂದುಸ್ತಾನ್ ಶಿಪ್ಯಾರ್ಡ್ನಲ್ಲಿ ಬೃಹತ್ ಕ್ರೇನ್ ಮಗುಚಿಬಿದ್ದು 11 ಕಾರ್ಮಿಕರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ವಿಝಾಗ್ನ ಸಿಂದಿಯಾ ಪ್ರದೇಶದಲ್ಲಿರುವ ಹಿಂದುಸ್ತಾನ್ ಶಿಪ್ಯಾರ್ಡ್ನಲ್ಲಿ ಶನಿವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಹಡಗು ನಿರ್ಮಾಣ ಕಾರ್ಯದಲ್ಲಿ ಬಳಸುವ ನೂತನ ಕ್ರೇನ್ನ ಸಾಮರ್ಥ್ಯ ಪರೀಕ್ಷಿಸುವಾಗ ಕ್ರೇನ್ ಮಗುಚಿ ಬಿದ್ದಿದೆ. ಸುಮಾರು 20 ಕಾರ್ಮಿಕರು ಈ ಸಂದರ್ಭ ಸ್ಥಳದಲ್ಲಿದ್ದರು. ಕೆಲವರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಸ್ಥೆಯ ಸೂಪರ್ವೈಸರ್ ಹಾಗೂ ಕ್ರೇನ್ ನಿರ್ವಾಹಕನ ಸಹಿತ ಕನಿಷ್ಟ 11 ಮಂದಿ ಸಾವನ್ನಪ್ಪಿದ್ದಾರೆ. ಕ್ರೇನ್ನಡಿಯಿಂದ ಮೂವರ ಮೃತದೇಹವನ್ನು ಹೊರತೆಗೆದು ಗುರುತಿಸಲಾಗಿದೆ. ಉಳಿದ ಮೃತದೇಹ ಗುರುತೂ ಸಿಗದ ರೀತಿಯಲ್ಲಿ ಅಪ್ಪಚ್ಚಿಯಾಗಿದೆ. ಮೂವರು ಗಾಯಾಳುಗಳಾಗಿದ್ದಾರೆ. ಕ್ರೇನ್ ಅನ್ನು ಮೇಲೆತ್ತುವ ಕಾರ್ಯಾಚರಣೆ ನಡೆದಿದೆ ಎಂದು ಡಿಸಿಪಿ ಸುರೇಶ್ ಬಾಬು ಹೇಳಿದ್ದಾರೆ.