ಅಯೋಧ್ಯೆ ಪ್ರಕರಣದ ಅಪೀಲುದಾರ ಇಕ್ಬಾಲ್ ಅನ್ಸಾರಿಗೆ ರಾಮ ಮಂದಿರ ಭೂಮಿ ಪೂಜೆಯ ಮೊದಲ ಆಹ್ವಾನ ಪತ್ರಿಕೆ
ಅಯೋಧ್ಯೆ: ಅಯೋಧ್ಯೆ ಭೂವಿವಾದ ಪ್ರಕರಣದಲ್ಲಿ ತಕರಾರು ಅರ್ಜಿ ಸಲ್ಲಿಸಿದವರಲ್ಲೊಬ್ಬರಾಗಿದ್ದ ಇಕ್ಬಾಲ್ ಅನ್ಸಾರಿ ಅವರು ರಾಮ ಮಂದಿರ ಭೂಮಿ ಪೂಜೆ ಸಮಾರಂಭದ ಆಹ್ವಾನ ಪತ್ರಿಕೆ ಪಡೆದ ಮೊದಲಿಗರಾಗಿದ್ದಾರೆ.
“ನಾನು ಮೊದಲ ಆಹ್ವಾನ ಪಡೆದಿರುವುದು ಶ್ರೀರಾಮನ ಇಚ್ಛೆ ಎಂದು ನಾನು ನಂಬಿದ್ದೇನೆ. ನಾನು ಅದನ್ನು ಸ್ವೀಕರಿಸುತ್ತೇನೆ. ಹಿಂದುಗಳು ಹಾಗೂ ಮುಸಲ್ಮಾನರು ಅಯೋಧ್ಯೆಯಲ್ಲಿ ಸಾಮರಸ್ಯದಿಂದ ಬಾಳುತ್ತಿದ್ದಾರೆ. ದೇವಸ್ಥಾನ ನಿರ್ಮಾಣಗೊಂಡಾಗ ಅಯೋಧ್ಯೆಯ ಭವಿಷ್ಯವೂ ಬದಲಾಗುವುದು. ಅಯೋಧ್ಯೆ ಇನ್ನಷ್ಟು ಸುಂದರವಾಗುವುದು ಹಾಗೂ ವಿಶ್ವದಾದ್ಯಂತದಿಂದ ತೀರ್ಥಯಾತ್ರಿಗಳೂ ಭವಿಷ್ಯದಲ್ಲಿ ಇಲ್ಲಿಗೆ ಆಗಮಿಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ಹೆಚ್ಚಾಗಲಿವೆ'' ಎಂದು ಅನ್ಸಾರಿ ಹೇಳಿದ್ದಾರೆ.
“ಜಗತ್ತು ಆಶಾವಾದದ ಮೇಲೆ ನಿಂತಿದೆ. ಧಾರ್ಮಿಕ ಕಾರ್ಯಕ್ರಮವಿದ್ದರೆ ಹಾಗೂ ನನಗೆ ಆಹ್ವಾನವಿತ್ತರೆ ನಾನು ಹೋಗುತ್ತೇನೆಂದು ಈ ಹಿಂದೆಯೇ ಹೇಳಿದ್ದೆ. ಅಯೋಧ್ಯೆಯಲ್ಲಿ ಎಲ್ಲಾ ಧರ್ಮ ಹಾಗೂ ಪಂಥದ ದೇವರುಗಳಿದ್ದಾರೆ. ಅದು ಸಂತರ ಭೂಮಿ ಅಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದರಿಂದ ನಮಗೆ ಸಂತಸವಿದೆ'' ಎಂದು ಅವರು ಹೇಳಿದರು.