ಅಯೋಧ್ಯೆ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ಮೋದಿ
ಅಯೋಧ್ಯೆ, ಆ.5: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪೂಜಾ ವಿಧಿವಿಧಾನದೊಂದಿಗೆ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿದರು.
ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಐದು ಇಟ್ಟಿಗೆಗಳನ್ನು ಬಳಸಲಾಗಿತ್ತು. ಭೂಮಿಪೂಜೆಗೆ ಬಳಸುವ ಗುದ್ದಲಿಯನ್ನು ವಿಧಿಪೂರ್ವಕವಾಗಿ ಪೂಜಿಸಲಾಯಿತು. ಭೂಮಿಗೆ ಆರತಿ ಬೆಳಗಿದ ಪ್ರಧಾನಿ ಮೋದಿ ಭೂಮಿಪೂಜೆಗೆ ನಿಗದಿಪಡಿಸಿರುವ ಸ್ಥಳಕ್ಕೆ ಪ್ರದಕ್ಷಿಣೆ ಬಂದರು.
ಶಿಲಾನ್ಯಾಸ ಕಾರ್ಯಕ್ರಮ ಮುಗಿದ ಬಳಿಕ ಮೋದಿಯವರು ವೇದಿಕೆ ಕಾರ್ಯಕ್ರಮದತ್ತ ತೆರಳಿದರು.
ಮೋದಿ,ಸಾಧು-ಸಂತರು,ರಾಜಕಾರಣಿಗಳು ಸೇರಿದಂತೆ ಒಟ್ಟು 175 ಅತಿಥಿಗಳು ಭೂಮಿಪೂಜೆಗೆ ಆಗಮಿಸಿದ್ದಾರೆಂದು ವರದಿಯಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಹೆಚ್ಚು ಜನ ಸ್ಥಳಕ್ಕೆ ಬಾರದಂತೆ ಮನವಿ ಮಾಡಲಾಗಿದೆ.
ದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ಲಕ್ನೊಗೆ ಆಗಮಿಸಿದ ಪ್ರಧಾನಿ ಮೋದಿ ಅಲ್ಲಿಂದ ಹೆಲಿಕಾಪ್ಟರ್ನ ಮೂಲಕ ಅಯೋಧ್ಯೆಗೆ ತೆರಳಿದರು.
ಬೆಳಗ್ಗೆ 10:30ಕ್ಕೆ ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಬಳಿಕ ಹೆಲಿಕಾಪ್ಟರ್ನ ಮೂಲಕ ಅಯೋಧ್ಯೆಯ ಸಾಕೇತ್ ಕಾಲನಿಗೆ ತೆರಳಿದರು. 11:45ಕ್ಕೆ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸರಯೂ ನದಿಗೆ ಪೂಜೆ ಸಲ್ಲಿಸಿದರು.