‘ಮೋದಿ ಝಿಂದಾಬಾದ್', ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತ; ಆಟೋ ಚಾಲಕನಿಗೆ ಹಲ್ಲೆಗೈದ ದುಷ್ಕರ್ಮಿಗಳು
Photo: twitter.com
ಜೈಪುರ್: ‘ಮೋದಿ ಝಿಂದಾಬಾದ್' ಹಾಗೂ `ಜೈ ಶ್ರೀರಾಮ್' ಘೋಷಣೆಗಳನ್ನು ಕೂಗಲು ನಿರಾಕರಿಸಿದ 52 ವರ್ಷದ ಆಟೋ ಚಾಲಕರೊಬ್ಬರಿಗೆ ಹಲ್ಲೆಗೈದ ಇಬ್ಬರನ್ನು ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಶಂಭುದಯಾಳ್ ಜಾಟ್ (35) ಹಾಗೂ ರಾಜೇಂದ್ರ ಜಾಟ್ (30) ಎಂಬಿಬ್ಬರನ್ನು ಬಂಧಿಸಿದ್ದಾರೆ.
ಆಟೋ ಚಾಲಕ ಗಫಾರ್ ಅಹ್ಮದ್ ಅವರ ದೂರಿನ ಮೇರೆಗೆ ಇಬ್ಬರನ್ನೂ ಬಂಧಿಸಲಾಗಿದೆ. ಆರೋಪಿಗಳು ತನ್ನ ಕೈಗಡಿಯಾರವನ್ನು ಹಾಗೂ ತನ್ನ ಬಳಿಯಿದ್ದ ಹಣ ದೋಚಿದ್ದಾರೆ ಎಂದು ಸಂತ್ರಸ್ತ ತಮ್ಮ ದೂರಿನಲ್ಲಿ ಆರೋಪಿಸಿದ್ದು ಹಲ್ಲೆಯಿಂದಾಗಿ ಅವರ ಹಲ್ಲು ಮುರಿದಿದೆ. ಕಣ್ಣು ಬಾತಿದೆ ಹಾಗೂ ಕೆನ್ನೆಗಳಲ್ಲಿ ಗಾಯಗಳಾಗಿವೆ.
ಹತ್ತಿರದ ಗ್ರಾಮದಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಸಾಗುತ್ತಿರುವ ವೇಳೆ ಕಾರಿನಲ್ಲಿ ಬಂದ ಇಬ್ಬರು ಅವರನ್ನು ತಡೆದು ತಂಬಾಕು ಕೇಳಿದ್ದರು. ಆದರೆ ಅವರು ನೀಡಿದ ತಂಬಾಕು ನಿರಾಕರಿಸಿದ ಆರೋಪಿಗಳು ‘ಮೋದಿ ಜಿಂದಾಬಾದ್’ ಹಾಗೂ ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿ ಅವರ ಕೆನ್ನೆಗೆ ಬಾರಿಸಿದ್ದರು ಎಂದು ಆರೋಪಿಸಲಾಗಿದೆ. ಚಾಲಕ ಅವರಿಂದ ತಪ್ಪಿಸಿ ವಾಹನದಲ್ಲಿ ಪರಾರಿಯಾದರೂ ಅವರು ಬೆಂಬತ್ತಿ ಅಡ್ಡಗಟ್ಟಿ ಮತ್ತೆ ಹಲ್ಲೆಗೈದಿದ್ದರು ಎಂದು ಸಂತ್ರಸ್ತ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.