ಇಡುಕ್ಕಿ ಭೂಕುಸಿತ: ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆ
ಇಡುಕ್ಕಿ, ಆ. 8: ಮುನ್ನಾರ್ನ ಪೆಟ್ಟಿಮುಡಿಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಿಂದ ಮಣ್ಣಿನಡಿ ಹಲವು ಮೃತದೇಹಗಳು ಸಿಲುಕಿರುವುದನ್ನು ರಕ್ಷಣಾ ತಂಡ ಶನಿವಾರ ಪತ್ತೆ ಮಾಡಿದೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ರಕ್ಷಣಾ ಕಾರ್ಯಾಚರಣೆಯನ್ನು ಸದೃಢಗೊಳಿಸಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್ಡಿಆರ್ಎಫ್), ರಕ್ಷಣಾ ಭದ್ರತಾ ಕಾರ್ಪ್ಸ್ ಹಾಗೂ ಅಗ್ನಿ ಶಾಮಕ ದಳದ ತಂಡಗಳು ಪೆಟ್ಟಿಮುಡಿಗೆ ಆಗಮಿಸಿವೆ. ಈ ಪ್ರದೇಶಕ್ಕೆ ತೆರಳುವ ರಸ್ತೆ ಹಾಗೂ ಸೇತುವೆಗಳು ಪ್ರವಾಹ, ಭೂಕುಸಿತದಿಂದ ಕೊಚ್ಚಿ ಹೋಗಿವೆ. ಆದುದರಿಂದ ಇಲ್ಲಿಗೆ ತಲುಪುದು ನಿಧಾನವಾಗಿದೆ ಎಂದು ವರದಿ ತಿಳಿಸಿದೆ.
ಮೃತದೇಹಗಳು ಬಂಡೆಗಳ ದಿಬ್ಬದ ಅಡಿ, ಮಣ್ಣಿನ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹಾಗೂ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಪೆಟ್ಟಿಮುಡಿ ಪ್ರದೇಶದಲ್ಲಿ ನೆಲೆಸಿದ ಪ್ಲಾಂಟೇಶನ್ ಕಾರ್ಮಿಕರು ತಮಿಳುನಾಡಿನ ವಲಸೆ ಕಾರ್ಮಿಕರು. ಪೆಟ್ಟಿಮುಡಿಯಲ್ಲಿ ಭೂಕುಸಿತ ಸಂಭವಿಸುವ ಮುನ್ನ ಅವರ ಕೆಲವರು ಸಂಬಂಧಿಕರು ಇಲ್ಲಿಗೆ ಆಗಮಿಸಿದ್ದರು. ಕಣ್ಮರೆಯಾದವರಲ್ಲಿ ಇವರು ಕೂಡ ಸೇರಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇವರಲ್ಲದೆ, ಮುನ್ನಾರ್ ಪಂಚಾಯತ್ನ ಮಾಜಿ ಸದಸ್ಯ ಅನಂತ ಶಿವನ್ ಹಾಗೂ ಅವರ ಕುಟುಂಬದ 21 ಸದಸ್ಯರು ಕಣ್ಮರೆಯಾಗಿದ್ದಾರೆ. ಭೂಕುಸಿತದಿಂದ ಪ್ಲಾಂಟೇಶನ್ ಕಾರ್ಮಿಕರು, ಕ್ಲಬ್, ಎಸ್ಟೇಟ್ ಕ್ಯಾಂಟಿನ್ ಕೊಚ್ಚಿಕೊಂಡು ಹೋಗಿವೆ.
ಈ ಪ್ರದೇಶದ ರಸ್ತೆ ಕೊಚ್ಚಿಕೊಂಡು ಹೋಗಿರುವುದು ರಕ್ಷಣಾ ಕಾರ್ಯಾಚರಣೆಗೆ ಅತಿ ದೊಡ್ಡ ಸವಾಲಾಗಿದೆ. ಮೃತದೇಹಗಳು ಮಣ್ಣು ಹಾಗೂ ಪ್ರವಾಹದೊಂದಿಗೆ ತೇಲಿ ಹೋಗಿರುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದಾರೆ.