'ಸೈದ್ಧಾಂತಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದು ಅವಶ್ಯಕವಾಗಿತ್ತು'
ರಾಹುಲ್, ಪ್ರಿಯಾಂಕಾ ಜೊತೆ ಮಾತುಕತೆ ಬಳಿಕ ಪ್ರತಿಕ್ರಿಯಿಸಿದ ಸಚಿನ್ ಪೈಲಟ್
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರ ಜೊತೆಗೆ ಮಾತುಕತೆ ನಡೆಸಿದ ಬಳಿಕ ಮೊತ್ತಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಬಂಡಾಯ ನಾಯಕ ಸಚಿನ್ ಪೈಲಟ್ ಪಕ್ಷದಲ್ಲಿನ ಸೈದ್ಧಾಂತಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದು ಅವಶ್ಯಕವಾಗಿತ್ತು ಎಂದಿದ್ದಾರೆ.
“ನಾವು ಪಕ್ಷದೊಂದಿಗೆ ಕೆಲಸ ಮಾಡುತ್ತಾ ಅಧಿಕಾರಕ್ಕೆ ಬಂದಿದ್ದೇವೆ. ಚುನಾವಣೆ ಗೆಲುವಿನ ನಂತರ ಅಶೋಕ್ ಗೆಹ್ಲೋಟ್ ರನ್ನು ಸಿಎಂ ಮಾಡಲಾಯಿತು. ನಾನು ಉಪ ಮುಖ್ಯಮಂತ್ರಿಯಾದೆ. ಮಾಧ್ಯಮದ ಮುಂದೆ ನನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ನಾನು ಬಯಸಿರಲಿಲ್ಲ” ಎಂದವರು ಪತ್ರಕರ್ತರ ಜೊತೆ ಹೇಳಿದರು.
“ನಾನು ಯಾವುದೇ ಸ್ಥಾನದ ಆಸೆ ಹೊಂದಿಲ್ಲ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎನ್ನುವ ಭರವಸೆ ನೀಡಲಾಗಿದೆ. ನಮ್ಮ ಸಮಸ್ಯೆಗಳನ್ನು ಆಲಿಸಿದ್ದಕ್ಕೆ ಪ್ರಿಯಾಂಕಾ ಗಾಂಧಿಯವರಿಗೆ ಧನ್ಯವಾದ ಹೇಳುತ್ತಿದ್ದೇನೆ” ಎಂದರು.
“ಕೆಲ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ನಾವು ಬಂಡಾಯದ ಮೊರೆ ಹೋಗಬೇಕಾಯಿತು. ಪಕ್ಷದ ಒಳಿತಿಗಾಗಿ ಇದು ಬೇಕಾಗಿತ್ತು. ನಮ್ಮ ಸಮಸ್ಯೆಗಳನ್ನು ಆಲಿಸಲು 3 ಸದಸ್ಯರ ಸಮಿತಿ ರಚಿಸಿದ್ದು ಸ್ವಾಗತಾರ್ಹ. ಪಕ್ಷವು ಸ್ಥಾನವೊಂದನ್ನು ನೀಡುತ್ತದೆ ಮತ್ತು ಅದು ಹಿಂಪಡೆಯುತ್ತದೆ” ಎಂದರು.