ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ: ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ ನಟಿ ರಿಯಾ ಚಕ್ರವರ್ತಿ
ಹೊಸದಿಲ್ಲಿ, ಆ. 10: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ವರ್ಗಾಯಿಸುವಲ್ಲಿ ತನ್ನ ಯಾವುದೇ ಆಕ್ಷೇಪ ಇಲ್ಲ ಎಂದು ನಟಿ ರಿಯಾ ಚಕ್ರವರ್ತಿ ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ಆದರೆ, ರಾಜಕೀಯ ಒತ್ತಡದಿಂದ ಬಿಹಾರ ಪೊಲೀಸರು ತಮ್ಮ ವ್ಯಾಪ್ತಿಯನ್ನು ಮೀರಿದ್ದರು ಹಾಗೂ ಅವರಿಗೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತನ್ನನ್ನು ಅಪರಾಧಿ ಎಂದು ಘೋಷಿಸುವ ಪ್ರಯತ್ನ ನಡೆಯುತ್ತಿದೆ. ತನ್ನ ವಿರುದ್ಧ ‘ಮಾಧ್ಯಮ ವಿಚಾರಣೆ’ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಿಯಾ ಚಕ್ರವರ್ತಿ ಸೋಮವಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದಾರೆ.
ಪ್ರಕರಣವನ್ನು ವರ್ಗಾವಣೆ ಮಾಡಿದರೂ, ನ್ಯಾಯಾಲಯದ ವ್ಯಾಪ್ತಿ ಪಾಟ್ನಾದ ಬದಲು ಮುಂಬೈ ಇರಬೇಕು ಎಂದು ರಿಯಾ ನ್ಯಾಯಾಲಯಕ್ಕೆ ತಿಳಿಸಿದರು.
ಈ ನಡುವೆ ಮುಂಬೈಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಸೋಮವಾರ ರಿಯಾ ಹಾಗೂ ಅವರ ಕುಟುಂಬದ ಸದಸ್ಯರನ್ನು ಮತ್ತೊಂದು ಸುತ್ತಿನ ವಿಚಾರಣೆ ಆರಂಭಿಸಿದೆ.