ಗೆಹ್ಲೋಟ್ ಸರಕಾರಕ್ಕೆ ನಿರ್ಣಾಯಕವಾಗಿರುವ 6 ಶಾಸಕರ ಕುರಿತ ಅರ್ಜಿ ಆ.11 ರಂದು ಸುಪ್ರೀಂನಲ್ಲಿ ವಿಚಾರಣೆ
ಹೊಸದಿಲ್ಲಿ, ಆ.10: ಕಾಂಗ್ರೆಸ್ನೊಂದಿಗೆ ಬಹುಜನ ಸಮಾಜವಾದಿ ಪಕ್ಷದ ಆರು ಶಾಸಕರ ವಿಲೀನಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (ಮಂಗಳವಾರ) ಸುಪ್ರೀಂಕೋರ್ಟ್ನಲ್ಲಿ ನಡೆಯಲಿದ್ದು , ಸುಪ್ರೀಂಕೋರ್ಟ್ ನೀಡುವ ತೀರ್ಪು ರಾಜಸ್ತಾನದ ಆಡಳಿತಾರೂಢ ಸರಕಾರಕ್ಕೆ ನಿರ್ಣಾಯಕವಾಗಿದೆ.
ಕಾಂಗ್ರೆಸ್ನೊಂದಿಗೆ ಬಿಎಸ್ಪಿ ಶಾಸಕರ ವಿಲೀನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ರಾಜಸ್ತಾನ ಹೈಕೋರ್ಟ್ನ ವಿಭಾಗೀಯ ಪೀಠ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರಾದ ಬಿಜೆಪಿ ಶಾಸಕ ಮದನ್ ದಿಲಾವರ್ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆಗಸ್ಟ್ 14ರಂದು ಆರಂಭವಾಗಲಿರುವ ರಾಜಸ್ತಾನ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿ ಮತಚಲಾಯಿಸದಂತೆ ಆರು ಶಾಸಕರನ್ನು ನಿರ್ಬಂಧಿಸಬೇಕೆಂದು ದಿಲಾವರ್ ಕೋರಿದ್ದರು.
ಸಚಿನ್ ಪೈಲಟ್ ಹಾಗೂ ಅವರ 18 ಬೆಂಬಲಿಗರ ಬಂಡಾಯದಿಂದ ಇಕ್ಕಟ್ಟಿಗೆ ಸಿಲುಕಿರುವ ಅಶೋಕ್ ಗೆಹ್ಲೋಟ್ ನೇತೃತದ ಸರಕಾರ ವಿಶ್ವಾಸಮತ ಎದುರಿಸಲಿದ್ದು ಈ ಸಂದರ್ಭ ಪಕ್ಷದೊಂದಿಗೆ ವಿಲೀನಗೊಂಡಿರುವ ಬಿಎಸ್ಪಿಯ ಆರು ಶಾಸಕರ ಬೆಂಬಲ ಅತ್ಯಗತ್ಯವಾಗಿದೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 101 ಶಾಸಕರ ಅಗತ್ಯವಿದ್ದು ತನಗೆ ಬಹುಮತವಿದೆ ಎಂದು ಗೆಹ್ಲೋಟ್ ಹೇಳುತ್ತಿದ್ದಾರೆ. ಒಂದು ವೇಳೆ ಬಿಎಸ್ಪಿ ಶಾಸಕರ ವಿಲೀನಕ್ಕೆ ಸುಪ್ರೀಂಕೋರ್ಟ್ ಅಸಮ್ಮತಿ ಸೂಚಿಸಿದರೆ ಆಗ ಸದನದ ಬಲ 194ಕ್ಕೆ ಕುಸಿಯಲಿದ್ದು ಬಹುಮತಕ್ಕೆ 97 ಶಾಸಕ ಬಲದ ಅಗತ್ಯ ಬೀಳುತ್ತದೆ. ಗೆಹ್ಲೋಟ್ಗೆ 96 ಶಾಸಕರ ಬೆಂಬಲವಿದ್ದರೆ ಬಿಜೆಪಿಯ 72 ಶಾಸಕರು, ಕಾಂಗ್ರೆಸ್ ಬಂಡಾಯ ಶಾಸಕರು ಹಾಗೂ ಪಕ್ಷೇತರ ಸದಸ್ಯರು ಒಟ್ಟು ಸೇರಿದರೆ ಆಗ ಸಂಖ್ಯೆ 97ಕ್ಕೇರುತ್ತದೆ.