ಖ್ಯಾತ ಉರ್ದು ಕವಿ ರಾಹತ್ ಇಂದೋರಿ ನಿಧನ
ಇಂದೋರ್, ಆ. 11 : ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಮಧ್ಯ ಪ್ರದೇಶದ ಇಂದೋರ್ ನಲ್ಲಿನ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರವಿವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಸೋಮವಾರ ರಾಹತ್ ಅವರಿಗೆ ಎರಡು ಬರಿ ಹೃದಯಾಘಾತವಾಗಿತ್ತು ಎಂದು ಆಸ್ಪತ್ರೆಯ ವೈದ್ಯ ಡಾ. ವಿನೋದ್ ಭಂಡಾರಿ ಹೇಳಿದ್ದಾರೆ.
ಭಾರತದ ಉರ್ದು ಕಾವ್ಯ ಜಗತ್ತಿನ ಅತ್ಯಂತ ಪ್ರಸಿದ್ಧ ಹೆಸರುಗಳಲ್ಲಿ ಒಂದಾಗಿದ್ದ ರಾಹತ್ ಅವರ ಕವಿಗೋಷ್ಠಿಗಳಲ್ಲಿ ಭಾರೀ ಸಂಖ್ಯೆಯ ಜನರು ಸೇರುತ್ತಿದ್ದರು. ಅವರ ಶಾಯರಿಗಳಿಗೆ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದರು. ಹಲವು ಹಿಂದಿ ಚಿತ್ರಗಳಿಗೂ ಗೀತರಚನೆಕಾರರಾಗಿದ್ದ ರಾಹತ್ ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದರು. ಆದರೆ ಕೆಲವು ಹಿಟ್ ಹಿಂದಿ ಚಿತ್ರಗೀತೆಗಳನ್ನು ನೀಡಿದ್ದರೂ ಬಳಿಕ ಅದರಿಂದ ಸಂಪೂರ್ಣ ಹೊರಬಂದು ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.
ದೇಶದಲ್ಲಿರುವ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳ ಕುರಿತು ಇಂದೋರಿ ಅವರ ಕವನದ ಸಾಲುಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದ್ದವು. ಕೆಲವು ತಿಂಗಳ ಹಿಂದೆ ಲೋಕಸಭೆಯಲ್ಲಿ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಚಾಟಿ ಬೀಸಿ ಮಾತಾಡಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುಆ ಮೊಯಿತ್ರಾ ಅವರು ಇಂದೋರಿ ಅವರ ಬಹಳ ಖ್ಯಾತ ಶಾಯರಿಯ ಸಾಲುಗಳನ್ನು ಉಲ್ಲೇಖಿಸಿದ್ದರು.
ಆ ಸಾಲುಗಳು ಹೀಗಿವೆ...
Agar khilaaf hain hone do jaan thodi hai
ye sab dhuaan hai koi aasmaan thodi hai
Lagegi aag to aayenge ghar kai zad mein
yahan pe sirf hamara makan thodi hai
Main janta hun ki dushman bhi kam nahi lekin
hamari tarah hatheli par jaan thodi hai
Hamare muhn sejo nikale vahi sadakat hai
hamare muhn mein tumhari zubaan thodi hai
Jo aaj sahib-e-masnad hai kal nahin honge
kirayedaar hain jati makan thodi hai
Sabhi ka khoon hai shamil yahan ki mitti main
kisi ke baap ka hindustaan thodi hai
ವಿರೋಧವಿದ್ದರೆ ಇರಲಿ ಬಿಡಿ, ಜೀವವೇನೂ ಅಲ್ಲವಲ್ಲ
ಇದೆಲ್ಲಾ ಕೇವಲ ಹೊಗೆ ಮಾತ್ರ, ಆಕಾಶವೇನೂ ಅಲ್ಲ
ಇಲ್ಲಿ ಬೆಂಕಿ ಬಿದ್ದರೆ ಎಲ್ಲರ ಮನೆಗಳೂ ಸುಡಲಿವೆ
ಇಲ್ಲಿರುವುದು ಕೇವಲ ನಮ್ಮ ಮನೆ ಮಾತ್ರ ಅಲ್ಲವಲ್ಲ
ಶತ್ರುಗಳೇನು ಕಡಿಮೆಯಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು
ಆದರೆ ಅವರು ನಮ್ಮ ಹಾಗೆ ಅಂಗೈಯಲ್ಲಿ ಜೀವ ಇಟ್ಟುಕೊಂಡಿಲ್ಲವಲ್ಲ
ನಮ್ಮ ಬಾಯಿಂದ ಏನು ಹೊರಟಿದೆಯೋ ಅದೇ ಸತ್ಯ
ನಮ್ಮ ಬಾಯಲ್ಲಿ ನಿಮ್ಮ ನಾಲಗೆಯಿಲ್ಲವಲ್ಲ
ಇವತ್ತು ಸಿಂಹಾಸನದಲ್ಲಿರುವವರು ನಾಳೆ ಇರುವುದಿಲ್ಲ
ಕೇವಲ ಬಾಡಿಗೆಗೆ ಇರುವವರು ಅವರು, ಮಾಲಕರೇನಲ್ಲ
ಇಲ್ಲಿಯ ಮಣ್ಣಲ್ಲಿ ಎಲ್ಲರ ರಕ್ತವಿದೆ
ಹಿಂದುಸ್ತಾನ ಯಾರಪ್ಪನ ಆಸ್ತಿಯೂ ಅಲ್ಲ
-ಉರ್ದು ಕವಿ ಡಾ.ರಾಹತ್ ಇಂದೋರಿ