ಸತ್ಯ ತಿಳಿಯುವ ಹಕ್ಕು ನಮಗಿದೆ: ಸುಶಾಂತ್ ಸಿಂಗ್ ರಜಪೂತ್ ಸಹೋದರಿ
ಹೊಸದಿಲ್ಲಿ, ಆ. 13: ತನ್ನ ಸಹೋದರ ಸಾವಿನ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ನಟ ಸುಶಾಂತ್ ಸಿಂಗ್ ರಜಪೂತ್ನ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಗುರುವಾರ ಆಗ್ರಹಿಸಿದ್ದಾರೆ.
ಸಿಬಿಐ ವಿಚಾರಣೆಗೆ ಆಗ್ರಹಿಸಿ ನಾವೆಲ್ಲರೂ ಸಂಘಟಿತರಾಗಿದ್ದೇವೆ. ನಿಷ್ಪಕ್ಷಪಾತ ತನಿಖೆ ನಮ್ಮ ಹಕ್ಕು. ಸತ್ಯ ಬಹಿರಂಗವಾಗಬೇಕು ಎಂಬ ಆಗ್ರಹ ಹೊರತುಪಡಿಸಿ ಬೇರೇನನ್ನೂ ನಾವು ನಿರೀಕ್ಷಿಸುವುದಿಲ್ಲ ಎಂದು ಶ್ವೇತಾ ಸಿಂಗ್ ಕೀರ್ತಿ ಇನ್ಸ್ಟಾಗ್ರಾಂನಲ್ಲಿ ವೀಡಿಯೊದೊಂದಿಗೆ ಬರೆದಿದ್ದಾರೆ.
ಬಿಹಾರ ಸರಕಾರದ ಶಿಫಾರಸಿಗೆ ಕೇಂದ್ರ ಸರಕಾರ ಕಳೆದ ವಾರ ಅನುಮೋದನೆ ನೀಡಿದ ಬಳಿಕ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.
ಸುಶಾಂತ್ ನ್ಯಾಯ ಸಲ್ಲಲು ಪ್ರತಿಯೊಬ್ಬರೂ ನೆರವು ನೀಡಬೇಕು ಎಂದು ಶ್ವೇತಾ ಸಿಂಗ್ ಕೀರ್ತಿ ಪ್ರತಿಯೊಬ್ಬರಲ್ಲೂ ಮನವಿ ಮಾಡಿದ್ದಾರೆ.
‘‘ಇದು ಸತ್ಯ ತಿಳಿಯುವ ಹಾಗೂ ನ್ಯಾಯ ಪಡೆಯುವ ಸಮಯ. ದಯವಿಟ್ಟು ನಮ್ಮ ಕುಟುಂಬಕ್ಕೆ ಸಹಾಯ ಮಾಡಿ. ಸತ್ಯ ಏನು ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ, ಅದನ್ನು ಬಹಿರಂಗಪಡಿಸಬೇಕಿದೆ. ಇಲ್ಲದೇ ಇದ್ದರೆ, ನಾವು ಶಾಂತಿಯುತವಾಗಿ ಬದುಕಲು ಎಂದಿಗೂ ಸಾಧ್ಯವಾಗದು. ಸುಶಾಂತ್ ಸಿಂಗ್ ರಜಪೂತ್ ಪರ ಧ್ವನಿ ಎತ್ತಿ. ನ್ಯಾಯಕ್ಕಾಗಿ ಆಗ್ರಹಿಸಿ’’ ಎಂದು ಅವರು ವೀಡಿಯೊದಲ್ಲಿ ಆಗ್ರಹಿಸಿದ್ದಾರೆ.