ರಾಜಸ್ಥಾನದಲ್ಲಿ ವಿಶೇಷ ಅಧಿವೇಶನ: ವಿಶ್ವಾಸಮತ ಯಾಚನೆಗೆ ಮುಂದಾದ ಅಶೋಕ್ ಗೆಹ್ಲೋಟ್
ಹೊಸದಿಲ್ಲಿ, ಆ.14: ರಾಜಸ್ಥಾನದ ವಿಶೇಷ ಅಧಿವೇಶನ ಶುಕ್ರವಾರ ಇಲ್ಲಿ ಆರಂಭವಾಗಿದ್ದು, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ವಿಶ್ವಾಸ ಮತ ಯಾಚನೆ ನಿರ್ಣಯ ಮಂಡಿಸಲಿದೆ.
ಅಧಿವೇಶನ ಸೇರಿದ ತಕ್ಷಣವೇ ಮಧ್ಯಾಹ್ನ 1 ಗಂಟೆಯ ತನಕ ಕಲಾಪವನ್ನು ಮುಂದೂಡಲಾಯಿತು. ಮಧ್ಯಾಹ್ನ 1 ಗಂಟೆಗೆ ಮತ್ತೆ ಕಲಾಪ ಆರಂಭವಾದಾಗ ವಿಶ್ವಾಸ ಮತ ಯಾಚನೆ ನಿರ್ಣಯವನ್ನು ಮಂಡಿಸಲಾಗುವುದು ಎಂದು ಸ್ಪೀಕರ್ ಸಿ.ಪಿ.ಜೋಶಿ ಹೇಳಿದ್ದಾರೆ.
ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನೇತೃತ್ವದ ಬಂಡಾಯದ ಶಾಸಕರು ಭಿನ್ನಾಭಿಪ್ರಾಯಬಿಟ್ಟು ಒಂದಾಗಿದ್ದಾರೆ ಎಂದು ಕಾಂಗ್ರೆಸ್ನ ಉನ್ನತ ನಾಯಕರು ಪ್ರಕಟಿಸಿದ ಕೆಲವೇ ದಿನಗಳ ಬಳಿಕ ಅಧಿವೇಶನ ನಡೆಯುತ್ತಿದೆ. ಬಂಡಾಯ ಸಾರಿದ್ದ 18 ಶಾಸಕರು ಇದೀಗ ಕಾಂಗ್ರೆಸ್ ತೆಕ್ಕೆಗೆ ವಾಪಸಾಗಿದ್ದಾರೆ.
ಅಶೋಕ್ ಗೆಹ್ಲೋಟ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಯೋಜನೆ ರೂಪಿಸಿರುವ ಪ್ರತಿಪಕ್ಷ ಬಿಜೆಪಿಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ನ ಒಗ್ಗಟ್ಟು ತಾತ್ಕಾಲಿಕ. ಈ ಸರಕಾರ ಹೆಚ್ಚು ಸಮಯ ಇರುವುದಿಲ್ಲ ಎಂದು ಬಿಜೆಪಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಗುರುವಾರ ಹೇಳಿದ್ದರು.