‘ಪಿಎಂ ಕೇರ್ಸ್’ ನಿಧಿಗೆ ಚೀನೀ ಸಂಸ್ಥೆಗಳ ದೇಣಿಗೆ ಬಂದಿದೆಯೇ?: ಚಿದಂಬರಂ ಪ್ರಶ್ನೆ
ಹೊಸದಿಲ್ಲಿ: “ಕೋವಿಡ್ 19 ನಿಯಂತ್ರಣಕ್ಕಾಗಿ ಸಹಾಯ ಮಾಡಲು ರಚಿಸಲಾದ ಪಿಎಂ ಕೇರ್ಸ್ ಫಂಡ್ ಗೆ ಮಾರ್ಚ್ ತಿಂಗಳ ಮೊದಲ ಐದು ದಿನಗಳಲ್ಲಿ ಯಾರು 3,076 ಕೋಟಿ ರೂ. ದೇಣಿಗೆ ನೀಡಿದ್ದರು?, ಇವರಲ್ಲಿ ಚೀನೀ ಸಂಸ್ಥೆಗಳೂ ಸೇರಿವೆಯೇ?, ಎಪ್ರಿಲ್ 1, 2020ರಿಂದ ಎಷ್ಟು ದೇಣಿಗೆ ಪಡೆಯಲಾಗಿದೆ?, ದೇಣಿಗೆ ನೀಡಿದವರು ಯಾರು?'' ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು ಟ್ವೀಟ್ ಮೂಲಕ ಎತ್ತಿದ್ದಾರೆ.
“ಈ ಪಿಎಂ ಕೇರ್ಸ್ ಫಂಡ್ ಆರ್ಟಿಐ ವ್ಯಾಪ್ತಿಯಿಂದ ಹೊರಗಿದ್ದರೆ ಈ ಮಹತ್ತರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?'' ಎಂದು ಇನ್ನೊಂದು ಟ್ವೀಟ್ ನಲ್ಲಿ ಚಿದಂಬರಂ ಪ್ರಶ್ನಿಸಿದ್ದಾರೆ.
ಪಿಎಂ ಕೇರ್ಸ್ ಫಂಡ್ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ವರ್ಗಾಯಿಸಲು ಆದೇಶಿಸಲು ನಿರಾಕರಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಚಿದಂಬರಂ ಅವರ ಪ್ರತಿಕ್ರಿಯೆ ಬಂದಿದೆ.
“ಪಿಎಂ ಕೇರ್ಸ್ ಫಂಡ್ ನ ಕಾನೂನುಬದ್ಧತೆ ಹಾಗೂ ಕಾನೂನಾತ್ಮಕ ಉತ್ತರದಾಯಿತ್ವದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಅಂತಿಮವಾಗಿರಬಹುದು, ಆದರೆ ಶೈಕ್ಷಣಿಕ ವಲಯಗಳಲ್ಲಿ ಬಹಳಷ್ಟು ಸಮಯದ ತನಕ ಅದನ್ನು ವಿರೋಧಿಸಲಾಗುತ್ತದೆ'' ಎಂದು ಚಿದಂಬರಂ ತಮ್ಮ ಸರಣಿ ಟ್ವೀಟ್ ಗಳ ಮುಖಾಂತರ ಹೇಳಿದ್ದಾರೆ.
ಪಿಎಂ ಕೇರ್ಸ್ ಹಣವನ್ನು ಎನ್ಡಿಆರ್ಎಫ್ ಗೆ ವರ್ಗಾಯಿಸಲು ಸರಕಾರಕ್ಕೆ ಸೂಚಿಸಬೇಕೆಂಬ ಅಪೀಲನ್ನು ಮಂಗಳವಾರ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಪಿಎಂ ಕೇರ್ಸ್ ಹಣ ಚಾರಿಟೇಬಲ್ ಟ್ರಸ್ಟ್ಗಳಿಂದ ಬಂದಿದ್ದು ಅವುಗಳು `ಸಂಪೂರ್ಣವಾಗಿ ಬೇರೆ' ಎಂದು ಹೇಳಿತ್ತು.