ಉತ್ತರ ಪ್ರದೇಶ: ವಿಪಕ್ಷಗಳ ಘೋಷಣೆ ನಡುವೆ ಚರ್ಚೆಯೇ ಇಲ್ಲದೆ ಹಲವು ಮಸೂದೆ ಅಂಗೀಕಾರ
ಲಕ್ನೋ, ಆ.23: ಉತ್ತರ ಪ್ರದೇಶ ರಿಕವರಿ ಆಫ್ ಡ್ಯಾಮೇಜಸ್ ಟೂ ಪಬ್ಲಿಕ್ ಆ್ಯಂಡ್ ಪ್ರೈವೇಟ್ ಪ್ರಾಪರ್ಟಿ ಬಿಲ್-2020 ಸೇರಿದಂತೆ ಹಲವು ಮಸೂದೆಗಳನ್ನು ರಾಜ್ಯ ವಿಧಾನಸಭೆ, ವಿರೋಧ ಪಕ್ಷಗಳ ಘೋಷಣೆ ನಡುವೆಯೂ ಯಾವ ಚರ್ಚೆಯನ್ನೂ ನಡೆಸದೇ ಅಂಗೀಕರಿಸಿದೆ.
ರಾಜ್ಯ ವಿಧಾನಸಭೆ ಕಲಾಪ ಆರಂಭಿಸಿದ ತಕ್ಷಣ ಇಬ್ಬರು ಮಾಜಿ ಸದಸ್ಯರಾದ ವಿವೇಕ್ ಸಿಂಗ್ ಮತ್ತು ಕನ್ವರ್ ಬಹದ್ದೂರ್ ಮಿಶ್ರಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿತು. ಈ ಹಂತದಲ್ಲಿ ವಿರೋಧ ಪಕ್ಷಗಳ ಸದಸ್ಯರು ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿ ಹದಗೆಟ್ಟಿದೆ ಎಂದು ಆಪಾದಿಸಿ ಸಭಾಧ್ಯಕ್ಷರ ಪೀಠದ ಮುಂದಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ಜತೆಗೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಆದರೆ ಇದರಿಂದ ವಿಚಲಿತರಾಗದ ಸದಸ್ಯರು ಕಲಾಪ ಆರಂಭಿಸಿದರು. ತಕ್ಷಣವೇ ಯಾವ ಚರ್ಚೆಯೂ ಇಲ್ಲದೇ ಕೆಲವೇ ನಿಮಿಷಗಳಲ್ಲಿ ಹಲವು ಮಸೂದೆಗಳನ್ನು ಆಂಗೀಕರಿಸಿದರು. ಉತ್ತರ ಪ್ರದೇಶ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣ ಮಸೂದೆ-2020 ಮತ್ತು ಗೋಹತ್ಯೆ ತಡೆ (ತಿದ್ದುಪಡಿ) ಮಸೂದೆ ಇದರಲ್ಲಿ ಸೇರಿವೆ.