ರಾಹುಲ್ ಗಾಂಧಿ ನಮ್ಮನ್ನು ಯಮುನಾ ನದಿಗೆಸೆಯಲು ಬಯಸುತ್ತಾರೆ: ಕಾಂಗ್ರೆಸ್ ಭಿನ್ನಮತೀಯ ನಾಯಕ
ಹೊಸದಿಲ್ಲಿ: ಇತ್ತೀಚೆಗೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಬಿರುಗಾಳಿಯೆಬ್ಬಿಸಿದ 23 ಭಿನ್ನಮತೀಯರು ಹೈಕಮಾಂಡ್ಗೆ ಬರೆದ ಪತ್ರ ಹಲವು ತಿಂಗಳುಗಳ ಚರ್ಚೆಯ ಫಲವಾಗಿತ್ತು ಎಂದು ಪತ್ರಕ್ಕೆ ಸಹಿ ಹಾಕಿದ ನಾಯಕರೊಬ್ಬರು ಹೇಳಿದ್ದಾರೆ.
ಪಕ್ಷದಲ್ಲಿ ಅಮೂಲಾಗ್ರ ಸುಧಾರಣೆ, ಸಾಮೂಹಿಕ ನಿರ್ಧಾರ ಕೈಗೊಳ್ಳುವಿಕೆ ಹಾಗೂ ಪೂರ್ಣಕಾಲಿಕ ನಾಯಕತ್ವಕ್ಕಾಗಿ ಆಗ್ರಹಿಸಿರುವ ಈ ಪತ್ರಕ್ಕೆ ಸಹಿ ಹಾಕಿದ ಹೆಚ್ಚಿನ ಹಾಗೂ ಈಗ `ಭಿನ್ನಮತೀಯರು' ಕರೆಯುಲ್ಪಡುವ ನಾಯಕರ ಪ್ರಮುಖ ದೂರು ರಾಹುಲ್ ಗಾಂಧಿ ವಿರುದ್ಧವಾಗಿತ್ತು. “ಅವರು ಪಕ್ಷದ ಹಿರಿಯ ನಾಯಕರ ಕುರಿತು ಸಂಪೂರ್ಣ ತಾತ್ಸಾರ ಹೊಂದಿದ್ದರು, ನಮ್ಮನ್ನು ಯಮುನಾ ನದಿಗೆಸೆಯಬೇಕೆಂದು ಅವರು ಬಯಸುತ್ತಾರೆ'' ಎಂದು ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪಕ್ಷದ ಸ್ಥಿತಿಗತಿಗಳ ಕುರಿತು ಬಹಳಷ್ಟು ಚಿಂತಿತವಾಗಿದ್ದ ಹಲವು ನಾಯಕರು ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ಕೋರಿದ್ದರೂ ಅದು ಅವರಿಗೆ ದೊರೆಯದೇ ಇದ್ದಾಗ ಪತ್ರ ಬರೆಯುವ ನಿರ್ಧಾರ ಕೈಗೊಳ್ಳಲಾಗಿತ್ತು.
ಸೋನಿಯಾ ಗಾಂಧಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಮರಳಿ ಮನೆಗೆ ವಾಪಸಾಗಿ ಒಂದು ವಾರದ ನಂತರ ಪತ್ರ ಅವರಿಗೆ ಕಳುಹಿಸಲಾಗಿತ್ತು. ವಾರದ ನಂತರ ಇನ್ನೊಂದು ನೆನಪಿನೋಲೆ ಹೋಗಿತ್ತು. ಗುಲಾಮ್ ನಬಿ ಆಝಾದ್ ಮತ್ತು ಪತ್ರಕ್ಕೆ ಸಹಿ ಹಾಕಿದ್ದ ಇತರ ಮೂವರು ನಾಯಕರ ವಿರುದ್ಧ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ವ್ಯವಸ್ಥಿತ ವಾಗ್ದಾಳಿ ನಡೆದಿತ್ತಲ್ಲದೆ ಆನ್ಲೈನ್ ಸಭೆ ಆರಂಭಗೊಂಡ ಸ್ಲಲ್ಪ ಹೊತ್ತಿನಲ್ಲಿ ಮಧ್ಯ ಪ್ರವೇಶಿಸಿದ ರಾಹುಲ್ ತಾಯಿಗೆ ಆತಂಕವುಂಟಾಗಬಹುದೆಂದು ಪತ್ರ ಓದುವುದನ್ನು ತಡೆದಿದ್ದೆ ಎಂದಿದ್ದರು.
ಪತ್ರದಲ್ಲಿ ಉಲ್ಲೇಖಿಸಲಾದ ವಿಚಾರಗಳ ಕುರಿತಂತೆ ಪರಿಶೀಲಿಸಲು ಸಮಿತಿಯೊಂದನ್ನೂ ರಚಿಸಲು ಕಾಂಗ್ರೆಸ್ ಈಗ ನಿರ್ಧರಿಸಿದೆ. ಮುಂದಿನ ಆರು ತಿಂಗಳೊಳಗೆ ಎಐಸಿಸಿ ಸಭೆ ನಡೆಯೂ ನಡೆದು ಹೊಸ ಅಧ್ಯಕ್ಷರ ಆಯ್ಕೆಯಾಗಲಿದೆ ಎಂಬ ವಿಚಾರವೂ ಭಿನ್ನಮತೀಯರಿಗೆ ಸಮಾಧಾನ ತಂದಿದೆಯೆನ್ನಲಾಗಿದೆ.