ಮಾನವ ನಿರ್ಮಿತ ವಿಪತ್ತಿಗೆ ದೇವರನ್ನು ದೂರಬೇಡಿ: ನಿರ್ಮಲಾ ಸೀತಾರಾಮನ್ ಗೆ ಚಿದಂಬರಂ ಸಲಹೆ
ಹೊಸದಿಲ್ಲಿ: ದೇಶದ ಆರ್ಥಿಕತೆ ಮೇಲೆ ಕೊರೋನ ವೈರಸ್ ಹಾವಳಿ ಬೀರಿದ ವ್ಯತಿರಿಕ್ತ ಪರಿಣಾಮವನ್ನು ‘ದೇವರ ಆಟ’ಕ್ಕೆ ಹೋಲಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿರುಗೇಟು ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ, ‘ಮಾನವ ನಿರ್ಮಿತ ವಿಪತ್ತಿಗೆ ದೇವರನ್ನು ದೂಷಿಸಬೇಡಿ’ ಎಂದಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಚಿದಂಬರಂ “ದೇವರನ್ನು ದೂರಬೇಡಿ. ವಾಸ್ತವವಾಗಿ ನೀವು ದೇವರಿಗೆ ಧನ್ಯವಾದ ತಿಳಿಸಬೇಕು. ದೇವರು ಈ ದೇಶದ ರೈತರ ಮೇಲೆ ಕೃಪೆ ತೋರಿದ್ದಾರೆ. ಈ ಸಾಂಕ್ರಾಮಿಕ ಒಂದು ನೈಸರ್ಗಿಕ ವಿಪತ್ತು. ಆದರೆ ನೀವು ಈ ನೈಸರ್ಗಿಕ ವಿಪತ್ತಾಗಿರುವ ಸಾಂಕ್ರಾಮಿಕವನ್ನು ಮಾನವ ನಿಮಿತ ವಿಪತ್ತನ್ನಾಗಿಸುತ್ತಿದ್ದೀರಿ'' ಎಂದು ಹೇಳಿದರು.
ಸರಕಾರದ ಆತ್ಮನಿರ್ಭರ್ ಪ್ಯಾಕೇಜ್ ಕುರಿತು ಪ್ರತಿಕ್ರಿಯಿಸಿದ ಚಿದಂಬರಂ ‘ಅದೊಂದು ತಮಾಷೆ’ ಎಂದರು.
ದೇಶದ ಜಿಡಿಪಿ ಗರಿಷ್ಠ ಕುಸಿತ ದಾಖಲಿಸಿದ ಕುರಿತಾದ ಅಂಕಿಅಂಶಗಳು ಹೊರಬಿದ್ದ ನಂತರ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಹ್ಮಣಿಯನ್ ಅವರು ನೀಡಿದ ಹೇಳಿಕೆಗಳ ಕುರಿತು ಮಾತನಾಡಿದ ಚಿದಂಬರಂ, “ಮುಖ್ಯ ಆರ್ಥಿಕ ಸಲಹೆಗಾರರನ್ನು ಯಾರಾದರೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೇ ಎಂಬುದು ತಿಳಿದಿಲ್ಲ. ಅವರು ಪ್ರಧಾನಿಯೊಂದಿಗೆ ಕೊನೆಯ ಬಾರಿ ಯಾವಾಗ ಮಾತನಾಡಿದ್ದಾರೆ?, ಅವರು ತಿಂಗಳುಗಳಿಂದ ವಿ-ಆಕಾರದ ಆರ್ಥಿಕ ಸುಧಾರNe ಕುರಿತು ಮಾತನಾಡುತ್ತಿದ್ದಾರೆ, ಅವರು ಆಧಾರವಾಗಿಟ್ಟುಕೊಂಡಿರುವ ಅಂಕಿಅಂಶಗಳನ್ನು ರಿಸರ್ವ್ ಬ್ಯಾಂಕ್ ವರದಿಯೇ ಅಲ್ಲಗಳೆದಿದೆ'' ಎಂದು ಹೇಳಿದರು.