ಉತ್ತರ ಪ್ರದೇಶ: ಐಪಿಎಸ್ ಅಧಿಕಾರಿ ವಿರುದ್ಧ ಲಂಚ ಆರೋಪ ಮಾಡಿದ್ದ ಉದ್ಯಮಿ ಗುಂಡೇಟಿಗೆ ಬಲಿ
ಲಕ್ನೋ: ಹಿರಿಯ ಐಪಿಎಸ್ ಅಧಿಕಾರಿ ಮಣಿಲಾಲ್ ಪಾಟಿದಾರ್ (ಪ್ರಸ್ತುತ ಅಮಾನತಿನಲ್ಲಿದ್ದಾರೆ) ವಿರುದ್ಧ ಲಂಚ ಆರೋಪ ಮಾಡಿದ್ದ ಉತ್ತರ ಪ್ರದೇಶದ ಉದ್ಯಮಿ ಗುಂಡೇಟಿಗೆ ಬಲಿಯಾಗಿದ್ದಾರೆ.
ಗುಂಡೇಟಿನಿಂದ ತೀವ್ರ ಗಾಯಗೊಂಡು ಕಾನ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂದ್ರಕಾಂತ್ ತ್ರಿಪಾಠಿ ರವಿವಾರ ರಾತ್ರಿ ಕೊನೆಯುಸಿರೆಳೆದರು. ತ್ರಿಪಾಠಿ, ಮೊಹಾಬಾ ಪಟ್ಟಣದ ಬಳಿ ಹೆದ್ದಾರಿಯಲ್ಲಿ ಇತ್ತೀಚೆಗೆ ಕಾರಿನಲ್ಲಿ ಕುತ್ತಿಗೆಗೆ ಗುಂಡೇಟು ತಗಲಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದ ಬಳಿಕ ತೀವ್ರ ನಿಗಾ ಘಟಕದಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.
ಈ ತಿಂಗಳ ಆರಂಭದಲ್ಲಿ ತ್ರಿಪಾಠಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿ, 2014ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಮಣಿಲಾಲ್ ಪಾಟೀದಾರ್ ವಿರುದ್ಧ ಲಂಚ ಮತ್ತು ಬೆದರಿಕೆಯ ಆರೋಪ ಮಾಡಿದ್ದರು.
ಗಣಿಗಾರಿಕೆಗೆ ಬಳಸುವ ಸ್ಫೋಟಕಗಳ ವ್ಯಾಪಾರ ನಡೆಸುತ್ತಿದ್ದ ತ್ರಿಪಾಠಿ, ನಾನು ಯಾವುದೇ ಬಗೆಯಲ್ಲಿ ಮೃತಪಟ್ಟರೆ ಅದಕ್ಕೆ ಅಧಿಕಾರಿಯೇ ಹೊಣೆ ಎಂದು ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೊ ವೈರಲ್ ಆದ 24 ಗಂಟೆಗಳ ಒಳಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯಂತೆ ಲಂಚ ಆರೋಪದಲ್ಲಿ ಪಾಟಿದಾರ್ ಅವರನ್ನು ಅಮಾನತು ಮಾಡಲಾಗಿತ್ತು. ಗಣಿಗಾರಿಕಾ ಕೇಂದ್ರವಾದ ಮೊಹಾಬದಲ್ಲಿ ಪಾಟಿದಾರ್ ಈ ಮುನ್ನ ಜಿಲ್ಲಾ ಪೊಲೀಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ವಿರುದ್ಧ ಕೊಲೆ ಯತ್ನ ಮತ್ತು ಲಂಚ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.