ಆಸ್ಪತ್ರೆಯ ಶವಾಗಾರದಲ್ಲಿ ಸ್ಟ್ರೆಚರ್ ಮೇಲೆ ಕೊಳೆತು ಹೋದ ಕಳೇಬರ ಪತ್ತೆ
ಇಂದೋರ್ : ಇಲ್ಲಿನ ಮಹಾರಾಜಾ ಯಶವಂತರಾವ್ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ವ್ಯಕ್ತಿಯೊಬ್ಬನ ಸಂಪೂರ್ಣ ಕೊಳೆತು ಹೋದ ಕಳೇಬರ ಅಲ್ಲಿರಿಸಲಾಗಿದ್ದ ಸ್ಟ್ರೆಚರಿನಲ್ಲಿ ಮಂಗಳವಾರ ಪತ್ತೆಯಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಶವಾಗಾರದಲ್ಲಿ 11 ದಿನಗಳ ಕಾಲ ಇತ್ತು ಹಾಗೂ ಅಂತ್ಯಕ್ರಿಯೆಗಾಗಿ ಯಾವುದಾದರೂ ಎನ್ಜಿಒ ಅಥವಾ ಇಂದೋರ್ ಪೌರ ಕಾರ್ಮಿಕರಿಗೆ ಹಸ್ತಾಂತರಿಸುವ ಸಲುವಾಗಿ ಸ್ಟ್ರೆಚರಿನಲ್ಲಿರಿಸಲಾಗಿತ್ತು ಎಂದು ಆಸ್ಪತ್ರೆ ಸ್ಪಷ್ಟೀಕರಣ ನೀಡಿದೆ.
``ಶವಾಗಾರದ ಜವಾಬ್ದಾರಿ ಹೊಂದಿರುವವರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಹಾಗೂ ಕರ್ತವ್ಯಲೋಪದ ಕುರಿತು ತನಿಖೆಯನ್ನೂ ನಡೆಸಲಾಗುವುದು,'' ಎಂದು ಆಸ್ಪತ್ರೆಯ ಅಧೀಕ್ಷಕಕ ಡಾ ಪಿ ಎಸ್ ಠಾಕುರ್ ತಿಳಿಸಿದ್ದಾರೆ.
``ಕೋವಿಡ್-19 ಸಮಸ್ಯೆಯಿಂದಾಗಿ ಆಸ್ಪತ್ರೆಯ ಶವಾಗಾರದಲ್ಲಿ ಹಲವಾರು ಕಳೇಬರಗಳನ್ನು ಇರಿಸಬೇಕಾಗಿರುವುದರಿಂದ ಕೆಲವೊಂದು ಬಾರಿ ಶೈತ್ಯಾಗಾರಗಳ ಕೊರತೆ ಎದುರಾಗುತ್ತದೆ. ಸದ್ಯ ಇಲ್ಲಿ 16 ಶೈತ್ಯಾಗಾರಗಳಿದ್ದು ಆದರೆ ಸಾಮಥ್ರ್ಯಕ್ಕಿಂತ ಅಧಿಕ ಕಳೇಬರಗಳನ್ನು ಇಲ್ಲಿಗೆ ತರಲಾಗುತ್ತಿದೆ. ಶವಾಗಾರಕ್ಕೆ ಹೆಚ್ಚು ಶೈತ್ಯಾಗಾರ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ,'' ಎಂದು ಅವರು ಹೇಳಿದರು.