ಅನ್ನವಿಲ್ಲದೆ ಕಾಡಿನಲ್ಲಿ ದೊರೆಯುವ ಗೆಡ್ಡೆಗಳನ್ನು ತಿಂದು ಬದುಕುತ್ತಿರುವ ದಲಿತ ಕುಟುಂಬ
ರಾಂಚಿ: ಜಾರ್ಖಂಡ್ ರಾಜ್ಯದ ಲಾತೆಹಾರ್ ಸಮೀಪದ ಹೆಸತು ಎಂಬ ಗ್ರಾಮದ ಬಡ, ರೇಷನ್ ಕಾರ್ಡ್ ವಂಚಿತ ದಲಿತ ಕುಟುಂಬ ತಿನ್ನಲು ಏನೂ ದೊರೆಯದೆ ಕಾಡಿನಲ್ಲಿ ದೊರೆಯುವ ಗೆಡ್ಡೆಗಳನ್ನು ತಿಂದು ಬದುಕುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ಗ್ರಾಮದಲ್ಲಿ ಮೇ ತಿಂಗಳಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಹಸಿವೆಗೆ ಬಲಿಯಾಗಿದ್ದಳು.
ದಲಿತ ಕುಟುಂಬ ಗೆಡ್ಡೆಗಳನ್ನು ತಿನ್ನುತ್ತಿರುವ ವೀಡಿಯೋ ಶುಕ್ರವಾರ ವೈರಲ್ ಆದ ನಂತರ ಮುಖ್ಯಮಂತ್ರಿ ಹೇಮಂತ್ ಸೊರೇನ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಆಹಾರ ದೊರೆಯದೆ ಸಂಕಷ್ಟದಲ್ಲಿರುವ ಬಡ ಕುಟುಂಬಗಳನ್ನು ಗುರುತಿಸುವಂತೆ ಅಲ್ಲಿನ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ವೀಡಿಯೋದಲ್ಲಿ ಕುಲದೀಪ್ ಭುಯಾನ್ ಎಂಬಾತ ತನ್ನ ಕುಟುಂಬ ಈ ರೀತಿ ಕಾಡಿನಲ್ಲಿ ದೊರೆಯುವ ಗೆಡ್ಡೆಗಳನ್ನು ತಿಂದು ಬದುಕುವ ಅನಿವಾರ್ಯತೆಯನ್ನು ವಿವರಿಸಿದ್ದಾನೆ.
``ಲಾಕ್ಡೌನ್ ಸಂಕಷ್ಟದ ಜತೆಗೆ ಸರಕಾರದಿಂದ ಯಾವುದೇ ಸಹಾಯ ಕೂಡ ದೊರೆತಿಲ್ಲ, ರೇಷನ್ ಕಾರ್ಡ್ ಕೂಡ ನಮ್ಮಲ್ಲಿಲ್ಲ,'' ಎಂದು ವೀಡಿಯೋದಲ್ಲಿ ಆತ ಹೇಳುತ್ತಿರುವುದು ಕೇಳಿಸುತ್ತದೆ.
ಸೀಎಂ ಆದೇಶದ ಬೆನ್ನಲ್ಲೇ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಗ್ರಾಮದಲ್ಲಿನ ಪ್ರತಿ ಕುಟುಂಬಕ್ಕೆ ರೇಷನ್ ಕಾರ್ಡ್ ಒದಗಿಸಿರುವಾಗ ಈ ಕುಟುಂಬಕ್ಕೆ ಹೇಗೆ ದೊರಲಿಲ್ಲ ಎಂದು ತಿಳಿಯಲು ಇದೀಗ ಅಧಿಕಾರಿಗಳಿಗೆ ಸೂಚಿಸಲಾಗಿದೆ.