'ಯುಪಿಎಸ್ಸಿ ಜಿಹಾದ್' ಕಾರ್ಯಕ್ರಮಕ್ಕೆ ತಡೆಯಾಜ್ಞೆ ಬಳಿಕವೂ ಸುಪ್ರೀಂ ಟೀಕೆ ಮುಂದುವರಿಸಿದ ಸುದರ್ಶನ್ ಟಿವಿ
ಹೊಸದಿಲ್ಲಿ: ಸುದರ್ಶನ್ ಟಿವಿಯ ವಿವಾದಿತ `ಯುಪಿಎಸ್ಸಿ ಜಿಹಾದ್' ಕಾರ್ಯಕ್ರಮ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ತಡೆ ಹೇರಿ ಸಂಸ್ಥೆಗೆ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿರುವ ಹೊರತಾಗಿಯೂ ಸುದರ್ಶನ್ ನ್ಯೂಸ್ ಸುಪ್ರೀಂ ಕೋರ್ಟನ್ನು ಕಟುವಾಗಿ ಟೀಕಿಸುವ ಹಾಗೂ ದ್ವೇಷದ ಹೇಳಿಕೆಗಳಿಂದ ಕೂಡಿದ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ.
ಈ ಕುರಿತಂತೆ ಸುಪ್ರೀಂ ಕೋರ್ಟಿನ ಗಮನವನ್ನು ಸುದರ್ಶನ್ ವಾಹಿನಿ ವಿರುದ್ಧ ದೂರು ದಾಖಲಿಸಿದ್ದ ವಕೀಲ ಫಿರೋಝ್ ಇಕ್ಬಾಲ್ ಖಾನ್ ಸೆಳೆದಿದ್ದಾರೆ. ಝಕಾತ್ ಫೌಂಡೇಶನ್ ಆಫ್ ಇಂಡಿಯಾ ಕುರಿತ ತನಿಖಾ ವರದಿ ಎಂದು ಹೇಳಿಕೊಂಡು ಕೆಲವೊಂದು ಅಂಶಗಳನ್ನು ಕೈಗೆತ್ತಿಕೊಂಡು ಸಂಸ್ಥೆಗೆ ಕೆಟ್ಟ ಹೆಸರು ತರಲು ಸುದರ್ಶನ್ ನ್ಯೂಸ್ ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಫೌಂಡೇಶನ್ ಕೂಡ ಸುಪ್ರೀಂ ಕೋರ್ಟ್ನಲ್ಲಿರುವ ಸುದರ್ಶನ್ ಟಿವಿ ಪ್ರಕರಣದಲ್ಲಿ ತನ್ನನ್ನೂ ಅಪೀಲುದಾರನನ್ನಾಗಿ ಸೇರಿಸಲು ಮನವಿ ಸಲ್ಲಿಸಿದೆ.
"ಒಂದು ವಾರದಲ್ಲಿ ಎರಡು ಬಾರಿ ತಡೆಯಾಜ್ಞೆ ನೀಡಿರುವುದು ಸುದರ್ಶನ್ ವಾಹಿನಿಯ ವಿರುದ್ಧ ನಡೆಸಿದ ಪಾಪ,'' ಎಂದು ಕಾರ್ಯಕ್ರಮದಲ್ಲಿ ಸುದರ್ಶನ್ ಟಿವಿಯ ಮುಖ್ಯ ಸಂಪಾದಕ ಸುರೇಶ್ ಚವ್ಹಂಕೆ ಹೇಳಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಕೋರ್ಟ್ ತಡೆಯಾಜ್ಞೆ ನೀಡಿದ ನಂತರದ ಕಾರ್ಯಕ್ರಮದಲ್ಲಿ ಮಧು ಪೂರ್ಣಿಮಾ ಕೀಶ್ವರ್ ಮಾತನಾಡಿ "ನ್ಯಾಯಾಲಯ ತನ್ನ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಹಾಕಿದೆ. ಮಿಷನ್ ಗಝ್ವಾ-ಇ-ಹಿಂದ್ ಪೂರ್ಣಗೊಳಿಸುವುದು ಅವರ ಹಕ್ಕೆಂದು ಅವರು ತಿಳಿದುಕೊಂಡಿದ್ದಾರೆ. ಅವರಿಗೆ ಇಡೀ ದೇಶ ಮತಾಂತರಗೊಳ್ಳಬೇಕಿದೆ. ಅವರಿಗೆ ಸಾರ್ವಜನಿಕ ಕಚೇರಿಗಳಿಗೆ ನುಸುಳಬೇಕಿದೆ. ಅವರು ಶಿಕ್ಷಣ ಸಚಿವಾಲಯದೊಳಗೆ ಮೊದಲ ದಿನದಿಂದೇ ನುಸುಳಿದ್ದಾರೆ,'' ಎಂದು ಹೇಳಿದ್ದಾರೆ.