ಪಂಜಾಬ್: ಕೃಷಿ ಮಸೂದೆಗಳನ್ನು ವಿರೋಧಿಸಿ ಸೆ. 25ರಂದು ಬಿಜೆಪಿಯ ಮಿತ್ರ ಪಕ್ಷದಿಂದ ರಸ್ತೆ ತಡೆ ಪ್ರತಿಭಟನೆ
ಸಾಂದರ್ಭಿಕ ಚಿತ್ರ
ಚಂಡೀಗಢ: ಸಂಸತ್ತಿನಲ್ಲಿ ಅಂಗೀಕಾರ ಪಡೆದ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್ ರಾಜ್ಯದಲ್ಲಿ ಬಿಜೆಪಿಯ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ ಸೆಪ್ಟೆಂಬರ್ 25ರಂದು 'ಚಕ್ಕಾ ಜಾಮ್' (ರಸ್ತೆ ತಡೆ) ಪ್ರತಿಭಟನೆಯನ್ನು ನಡೆಸಲಿದೆ ಎಂದು ಅಕಾಲಿ ದಳದ ನಾಯಕ ದಲ್ಜಿತ್ ಸಿಂಗ್ ಚೀಮಾ ಹೇಳಿದ್ದಾರೆ.
ಪ್ರತಿಭಟನೆಯ ಭಾಗವಾಗಿ ಪಕ್ಷದ ಹಿರಿಯ ನಾಯಕರು, ರೈತರು ಹಾಗೂ ಕೃಷಿ ಕಾರ್ಮಿಕರು ರಾಜ್ಯಾದ್ಯಂತ ಬೆಳಿಗ್ಗೆ 11 ಗಂಟೆಯಿಂದ ಮೂರು ತಾಸು ಶಾಂತಿಯುತ ರಸ್ತೆತಡೆ ನಡೆಸಲಿದ್ದಾರೆ.
ಸೋಮವಾರ ಶಿರೋಮಣಿ ಅಕಾಲಿ ದಳದ ನಾಯಕರ ನಿಯೋಗವೊಂದು ರಾಷ್ಟ್ರಪತಿಗಳನ್ನು ಭೇಟಿಯಾಗಿ ಮಸೂದೆಗಳಿಗೆ ಅಂಕಿತ ನೀಡದಂತೆ ಮನವಿ ಮಾಡಿದೆ. ಈಗಾಗಲೇ ಶಿರೋಮಣಿ ಅಕಾಲಿ ದಳದ ಭಟಿಂಡಾ ಸಂಸದೆ ಹರ್ಸಿಮ್ರತ್ ಕೌರ್ ಅವರು ಮಸೂದೆಗಳನ್ನು ವಿರೋಧಿಸಿ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಸುಮಾರು 30 ರೈತ ಸಂಘಟನೆಗಳು ಈಗಾಗಲೇ ಸೆಪ್ಟೆಂಬರ್ 25ರಂದು ಪಂಜಾಬ್ ಬಂದ್ಗೆ ಕರೆ ನೀಡಿವೆ.
Next Story