ಇಷ್ಟು ವರ್ಷಗಳಲ್ಲಿ ಪ್ರಧಾನಿ ಎನ್ಡಿಎ ಸಭೆಯನ್ನೇ ಕರೆದಿಲ್ಲ: ಶಿರೋಮಣಿ ಅಕಾಲಿದಳ ಮುಖ್ಯಸ್ಥ
"ಎನ್ಡಿಎ ಮೈತ್ರಿಕೂಟ ಕೇವಲ ಹೆಸರಿಗೆ ಮಾತ್ರ"
ಹೊಸದಿಲ್ಲಿ, ಸೆ.28: ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ಡಿಎ)ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಎನ್ಡಿಎ ಮೈತ್ರಿಕೂಟ ಕೇವಲ ಹೆಸರಿಗೆ ಮಾತ್ರ ಎಂದು ಎನ್ಡಿಎಯೊಂದಿಗಿನ ದೀರ್ಘಕಾಲದ ನಂಟನ್ನು ಕಳೆದುಕೊಂಡಿರುವ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಕಳೆದ 7,8 ಹಾಗೂ 10 ವರ್ಷಗಳಿಂದ ಎನ್ಡಿಎ ಹೆಸರಿಗೆ ಮಾತ್ರ ಇದೆ. ಎನ್ಡಿಎಯಲ್ಲಿ ಏನೂ ಇಲ್ಲ. ಯಾವುದೇ ಚರ್ಚೆ ಇಲ್ಲ, ಸಭೆಗಳಿಲ್ಲ. ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಎನ್ಡಿಎ ಸಭೆಯನ್ನು ಕರೆದು ಅವರ ಮನಸ್ಸಿನಲ್ಲಿರುವುದನ್ನು ಚರ್ಚಿಸಿರುವುದು ನನಗೆ ನೆನಪಿಲ್ಲ. ಮೈತ್ರಿಕೂಟ ಕೇವಲ ಕಾಗದಕ್ಕೆ ಸೀಮಿತವಾಗಿರಬಾರದು. ಈ ಹಿಂದೆ ಎಬಿ ವಾಜಪೇಯಿ ಕಾಲದಲ್ಲಿ ಮೈತ್ರಿಕೂಟದಲ್ಲಿ ಉತ್ತಮ ಸಂಬಂಧವಿತ್ತು. ನನ್ನ ತಂದೆ ಎನ್ಡಿಎ ಸ್ಥಾಪಕ ಸದಸ್ಯರಾಗಿದ್ದಾರೆ. ನಾವು ಎನ್ಡಿಎ ರಚಿಸಿರುವುದು ವಿಷಾದಕರ. ಆದರೆ, ನಾವು ರಚಿಸಿದ ಎನ್ಡಿಎ ಈಗ ಇಲ್ಲವಾಗಿದೆ ಎಂದರು.
ನನ್ನ ತಂದೆ ಪ್ರಕಾಶ್ ಸಿಂಗ್ ಬಾದಲ್ ಮಾಡಿದ ರೀತಿಯಲ್ಲಿಯೇ ಮೈತ್ರಿ ಮಾಡಿಕೊಳ್ಳಬೇಕು. ಪ್ರತಿ ನಿರ್ಧಾರಕ್ಕೂ ಅವರು ಬಿಜೆಪಿಯನ್ನು ಕರೆಯುತ್ತಿದ್ದರು. ಯಾವುದೇ ಜ್ಞಾಪಕ ಪತ್ರವನ್ನು ಸಲ್ಲಿಸಲು ನಾವು ರಾಜ್ಯಪಾಲರ ಬಳಿಗೆ ಹೋದಾಗಲೆಲ್ಲಾ ಬಿಜೆಪಿ ನಮ್ಮೊಂದಿಗೆ ಇರುತ್ತಿತ್ತು. ಪಂಜಾಬ್ ರಾಜ್ಯದಲ್ಲಿ ನಾವು ಬಹುಸಂಖ್ಯಾತ ಪಾಲುದಾರರು ಹಾಗೂ ಅವರು ಅಲ್ಪಸಂಖ್ಯಾತ ಪಾಲುದಾರರು. ಅದರ ಹೊರತಾಗಿಯೂ ನಾವು ಅವರನ್ನು ಎಲ್ಲದ್ದಕ್ಕೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೆವು ಎಂದು ಬಾದಲ್ ಹೇಳಿದರು.