ಪ್ರೇಯಸಿಗೆ ಗುಂಡಿಕ್ಕಿ ಗಾಯಗೊಳಿಸಿ, ಮಾವನನ್ನು ಹತ್ಯೆಗೈದ ಪೊಲೀಸ್ ಅಧಿಕಾರಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ.28: ಪ್ರೇಯಸಿಯೊಂದಿಗೆ ಜಗಳವಾಡಿದ ಪೊಲೀಸ್ ಅಧಿಕಾರಿಯೊಬ್ಬ ಆಕೆಯನ್ನು ತನ್ನ ಸರ್ವಿಸ್ ರಿವಾಲ್ವರ್ನಿಂದ ಗುಂಡಿಕ್ಕಿ ಗಾಯಗೊಳಿಸಿದ್ದಲ್ಲದೆ ಬಳಿಕ ಪತ್ನಿಯ ಮನೆಗೆ ತೆರಳಿ ಪತ್ನಿಯ ತಂದೆ(ಮಾವ)ಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವಿಲಕ್ಷಣ ಘಟನೆ ಹರ್ಯಾಣದ ರೋಹ್ಟಕ್ನಲ್ಲಿ ಸೋಮವಾರ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆರೋಪಿ ಅಧಿಕಾರಿಯನ್ನು ದಿಲ್ಲಿ ಲಹೋರಿಗೇಟ್ ಪೊಲೀಸ್ಠಾಣೆಯ ಎಸ್ಐ ಸಂದೀಪ್ ದಹಿಯಾ ಎಂದು ಗುರುತಿಸಲಾಗಿದೆ. ಈತನೊಂದಿಗೆ ಮನಸ್ತಾಪ ಹೊಂದಿದ್ದ ಪತ್ನಿ ಕೆಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ದಹಿಯಾ ಕಳೆದ ವರ್ಷದಿಂದ ದಿಲ್ಲಿಯ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದ. ರವಿವಾರ ಉತ್ತರದಿಲ್ಲಿಯ ಆಲಿಪುರ ಪ್ರದೇಶದ ಜಿಟಿ ಕರ್ನಾಲ್ ರಸ್ತೆಯಲ್ಲಿ ಪ್ರೇಯಸಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಇಬ್ಬರ ಮಧ್ಯೆ ವಾಗ್ವಾದ ಆರಂಭವಾಗಿದ್ದು, ತಾಳ್ಮೆ ಕಳೆದುಕೊಂಡ ದಹಿಯಾ ತನ್ನಲ್ಲಿದ್ದ ಪಿಸ್ತೂಲಿನಿಂದ ಪ್ರೇಯಸಿಯ ಮೇಲೆ ಗುಂಡು ಹಾರಿಸಿದ್ದಾನೆ. ಗಂಭೀರ ಗಾಯಗೊಂಡಿದ್ದ ಆಕೆಯನ್ನು ರಸ್ತೆ ಬದಿ ಬಿಟ್ಟು ತೆರಳಿದ್ದು, ಅದೇ ದಾರಿಯಲ್ಲಿ ಬರುತ್ತಿದ್ದ ಎಸ್ಐ ಜೈವೀರ್ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ದಹಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ, ಪ್ರೇಯಸಿಗೆ ಗುಂಡಿಕ್ಕಿದ್ದ ದಹಿಯಾ, ಹರ್ಯಾಣದ ರೋಹ್ಟಕ್ನಲ್ಲಿರುವ ತನ್ನ ಪತ್ನಿಯ ಮನೆಗೆ ತೆರಳಿದ್ದಾನೆ. ಆದರೆ ಪತ್ನಿ ಮನೆಯಲ್ಲಿರಲಿಲ್ಲ. ಮನೆಯಲ್ಲಿದ್ದ ಮಾವ ರಣವೀರ್ ಸಿಂಗ್ನನ್ನು ಗುಂಡಿಕ್ಕಿ ಹತ್ಯೆ ಮಾಡಿ, ತನ್ನ ಸರ್ವಿಸ್ ರಿವಾಲ್ವರ್ನೊಂದಿಗೆ ನಾಪತ್ತೆಯಾಗಿದ್ದಾನೆ . ಆರೋಪಿಯ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.