ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ಗೆ ಗೃಹ ಬಂಧನ
ಉತ್ತರಪ್ರದೇಶದ ದಲಿತ ಯುವತಿಯ ಅತ್ಯಾಚಾರಕ್ಕೆ ಭಾರೀ ಪ್ರತಿಭಟನೆ
ನೋಯ್ಡ, ಅ.1: ಉತ್ತರಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ ಸಾವನ್ನಪ್ಪಿರುವ 19 ವರ್ಷದ ದಲಿತ ಯುವತಿಯ ಕುಟುಂಬದೊಂದಿಗೆ ದಿಲ್ಲಿಯಿಂದ ಹತ್ರಾಸ್ಗೆ ತೆರಳುತ್ತಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರನ್ನು ಪೊಲೀಸರು ದಾರಿ ಮಧ್ಯೆದಲ್ಲಿ ತಡೆದು ಬಂಧಿಸಿದ್ದಾರೆ. ಈಗ ಅವರನ್ನು ಸಹರಾನ್ಪುರದಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ.
ನಮ್ಮ ಸಹೋದರಿಯನ್ನು ಕುಟುಂಬದ ಅನುಪಸ್ಥಿತಿಯಲ್ಲಿ ಹಾಗೂ ಅವರ ಒಪ್ಪಿಗೆ ಇಲ್ಲದೆ ಸರಕಾರ ಹಾಗೂ ಪೊಲೀಸರ ಅನುಸಾರವಾಗಿ ಹೇಗೆ ಅಂತ್ಯಕ್ರಿಯೆ ನಡೆಸಲಾಯಿತು ಎಂಬುದನ್ನು ಇಡೀ ಜಗತ್ತು ನೋಡಿದೆ. ಈ ಜನರ ನೈತಿಕತೆ ಸತ್ತುಹೋಗಿದೆ. ಬುಧವಾರ ರಾತ್ರಿ ಉತ್ತರಪ್ರದೇಶ ಪೊಲೀಸರು ನನ್ನನ್ನು ವಶಕ್ಕೆ ತೆಗೆದುಕೊಂಡರು. ಈಗ ನನ್ನನ್ನು ಸಹರಾನ್ಪುರದಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ. ಆದರೆ ನಾವು ಹೋರಾಡುತ್ತೇವೆ ಎಂದು ಆಝಾದ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸಹರಾನ್ಪುರ ಪೊಲೀಸರು ತನಗೆ ನೀಡಿರುವ ನೋಟಿಸ್ನ ಚಿತ್ರವನ್ನು ಆಝಾದ್ ಹಂಚಿಕೊಂಡಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 144ನ್ನು ಜಿಲ್ಲೆಯಲ್ಲಿ ವಿಧಿಸಲಾಗಿದೆ ಎಂದು ನಿಮಗೆ ತಿಳಿಸಲಾಗುತ್ತಿದೆ. ನೀವು ಅಲ್ಲಿಗೆ ತೆರಳುವುದರಿಂದ ಭಾರೀ ಜನರು ಸೇರುತ್ತಾರೆಂಬ ವಿಶ್ವಾಸಾರ್ಹ ಮಾಹಿತಿ ಲಭಿಸಿದೆ. ನೀವು ತೆರಳುವುದರಿಂದ ಕಾನೂನು,ಸುವ್ಯವಸ್ಥೆ ಪರಿಸ್ಥಿತಿಗೆ ಧಕ್ಕೆಯಾಗಬಹುದು. ಹೀಗಾಗಿ ನೀವು ಮನೆಯಲ್ಲಿ ಮಾತ್ರ ಇರುತ್ತೀರಿ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.