ಆಕೆಯ ನಾಲಗೆಯನ್ನು ಕತ್ತರಿಸಿಲ್ಲ: ಹತ್ರಸ್ ಸಂತ್ರಸ್ತೆಯ ವೀಡಿಯೋ ಪೋಸ್ಟ್ ಮಾಡಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ
ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಆಕ್ರೋಶ
ಚೆನ್ನೈ: ಹತ್ರಸ್ ಸಂತ್ರಸ್ತೆಯ ವೀಡಿಯೋವೊಂದನ್ನು ಪೋಸ್ಟ್ ಮಾಡಿ ಅಸಂವೇದಿತನದ ಟ್ವೀಟ್ ಮಾಡಿರುವ ತಮಿಳುನಾಡು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸಿ ಟಿ ಆರ್ ನಿರ್ಮಲ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ವೀಡಿಯೋದಲ್ಲಿ ಸಂತ್ರಸ್ತೆಯ ಮುಖ ಸ್ಪಷ್ಟವಾಗಿ ಕಾಣುತ್ತಿದ್ದು ಅತ್ಯಾಚಾರ ಸಂತ್ರಸ್ತರ ಗುರುತನ್ನು ಮಾದ್ಯಮಗಳಲ್ಲಿ ಬಹಿರಂಗಪಡಿಸಬಾರದು ಎಂಬ ಸುಪ್ರೀಂ ಕೋರ್ಟ್ ನಿಯಮಾವಳಿಯ ಉಲ್ಲಂಘನೆಯಾಗಿದೆ.
“ಸಂತ್ರಸ್ತೆ ತನ್ನ ಹೇಳಿಕೆಯನ್ನು ನೇರವಾಗಿ ಪೊಲೀಸರಿಗೆ ನೀಡಿದ್ದರಿಂದ ಆಕೆ ನಾಲಗೆಯನ್ನು ಆರೋಪಿಗಳು ಕತ್ತರಿಸಿಲ್ಲ ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ” ಎಂದು ನಿರ್ಮಲ್ ಕುಮಾರ್ ಹೇಳಿಕೊಂಡಿದ್ದಾರೆ.
“ಇದು ಹತ್ರಸ್ ಸಂತ್ರಸ್ತೆಯ ವೀಡಿಯೋ. ಆಕೆ ನಿರರ್ಗಳವಾಗಿ ಮಾತನಾಡುತ್ತಿದ್ದಾಳೆ ಹಾಗೂ ಆಕೆಯ ನಾಲಗೆ ಕತ್ತರಿಸಿ ಹಾಕಲಾಗಿಲ್ಲ. ಆಕೆ ಅತ್ಯಾಚಾರ ಕುರಿತೂ ಹೇಳಿಲ್ಲ. ಇಟಾಲಿಯನ್ ಮಾಫಿಯಾ ಯಾವತ್ತೂ ಮುಗ್ಧ ಜನರ ಮೇಲೆ ಅಗ್ಗದ ರಾಜಕೀಯ ಮಾಡುತ್ತಿದೆ,'' ಎಂದು ಅವರು ಬರೆದಿದ್ದಾರೆ.
ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಯುವತಿ ವೀಡಿಯೋದಲ್ಲಿ ಹೇಳಿಕೆ ನೀಡಿದ್ದು ಆರೋಪಿಗಳು ತನ್ನನ್ನು ಬಲವಂತಪಡಿಸಿದ್ದು ತಾನು ವಿರೋಧಿಸಿದಾಗ ತನ್ನ ಕತ್ತು ಹಿಚುಕಿದ್ದಾರೆ, ಎಂದು ಆಕೆ ಹೇಳುವುದು ಕೇಳಿಸುತ್ತದೆ.
ಬಿಜೆಪಿ ನಾಯಕನ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಸೃಷ್ಟಿಸಿದ್ದರೂ ಆ ಟ್ವೀಟ್ ಅನ್ನು ಅವರಿನ್ನೂ ಡಿಲೀಟ್ ಮಾಡಿಲ್ಲ. “ಮಾಧ್ಯಮಗಳು ವರದಿ ಮಾಡಲು ವಿಫಲವಾದ ಸತ್ಯವನ್ನು ಹೇಳುವುದೇ ನನ್ನ ಟ್ವೀಟ್ನ ಉದ್ದೇಶ. ಇಂತಹ ಘಟನೆಗಳನ್ನು ರಾಜಕೀಯಗೊಳಿಸಬಾರದು, ಅಧಿಕೃತ ಹೇಳಿಕೆ ಸರಕಾರದಿಂದ ಬರುವ ತನಕ ಯಾವುದೇ ತೀರ್ಮಾನಕ್ಕೆ ಬರಕೂಡದು,'' ಎಂದು ಅವರು ಹೇಳಿದ್ದಾರೆ.