ರಾಹುಲ್ ಗಾಂಧಿ, ಪ್ರಿಯಾಂಕಾ ವಿರುದ್ಧ ಉ.ಪ್ರ.ಪೊಲೀಸರಿಂದ ಕೇಸ್ ದಾಖಲು
ಹೊಸದಿಲ್ಲಿ, ಅ.1: ಕ್ರೂರ ಚಿತ್ರಹಿಂಸೆ ಹಾಗೂ ಸಾಮೂಹಿಕ ಅತ್ಯಾಚಾರದ ನಂತರ ಮಂಗಳವಾರ ದಿಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ 20 ವರ್ಷದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವಾನ ಹೇಳಲು ಹತ್ರಾಸ್ಗೆ ತೆರಳುತ್ತಿದ್ದ ದಾರಿ ಮಧ್ಯೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿರುವ ಕೆಲವೇ ಗಂಟೆಗಳ ಬಳಿಕ ಇಬ್ಬರ ವಿರುದ್ಧ ಸಾಂಕ್ರಾಮಿಕ ಕಾಯ್ದೆ ಅಡಿ ಪೊಲೀಸ್ ಪ್ರಕರಣವನ್ನು ದಾಖಲಿಸಲಾಗಿದೆ.
ಯಮುನಾ ಎಕ್ಸ್ಪ್ರೆಸ್ ವೇಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಉತ್ತರಪ್ರದೇಶ ಪೊಲೀಸರು ಕೆಟ್ಟದ್ದಾಗಿ ವರ್ತಿಸಿದ್ದು, ಇದೀಗ ಪ್ರಕರಣವನ್ನು ದಾಖಲಿಸುವುದರೊಂದಿಗೆ ತೀವ್ರ ರಾಜಕೀಯ ತಿರುವು ಪಡೆದುಕೊಂಡಿದೆ.
ರಾಹುಲ್ ಹಾಗೂ ಪ್ರಿಯಾಂಕಾ ಸಾಗುತ್ತಿದ್ದ ವಾಹನವನ್ನು ತಡೆದ ಬಳಿಕ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹತ್ರಾಸ್ನತ್ತ ಮೆರವಣಿಗೆ ನಡೆಸಿರುವುದಕ್ಕೆ ಸಾಂಕ್ರಾಮಿಕ ಕಾನೂನಿನಡಿ ಯು.ಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಯುವತಿಯ ಪ್ರಕರಣವನ್ನು ಸರಿಯಾಗಿ ನಿರ್ವಹಿಸದ ಉತ್ತರಪ್ರದೇಶ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ನಡುವೆ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಅಕ್ಟೋಬರ್ 12 ರಂದು ಪೊಲೀಸ್ ಹಾಗೂ ಆಡಳಿತದ ಉನ್ನತ ಅಧಿಕಾರಿಗಳಿಗೆ ಹಾಜರಾಗುವಂತೆ ಸಮನ್ಸ್ ಕಳುಹಿಸಿದೆ.