ಲಕ್ನೋ : ಸಿಗದ ಮಾಂಸ, ಖ್ಯಾತ ಕಬಾಬ್ ಮಳಿಗೆ ಬಂದ್
ಲಕ್ನೋ, ಮಾ.23 : ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗೀ ಅಧಿಕಾರ ವಹಿಸುತ್ತಿದ್ದಂತೆಯೇ ರಾಜ್ಯದಾದ್ಯಂತವಿರುವ ಅಕ್ರಮ ಮಾಂಸದಂಗಡಿಗಳು ಹಾಗೂ ಕಸಾಯಿಖಾನೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳುತ್ತಿರುವುದರಿಂದ ಮಾಂಸದ ಕೊರತೆಯುಂಟಾಗಿದ್ದು ನಗರದ ಖ್ಯಾತ ಕಬಾಬ್ ಮಳಿಗೆ ತುಂಡೆ ಕಬಾಬಿ ಬುಧವಾರ ಮುಚ್ಚಬೇಕಾದ ಅನಿವಾರ್ಯತೆ ಎದುರಿಸಿತು. ಈ ಕಬಾಬ್ ಮಳಿಗೆ ನಗರದಲ್ಲಿ 1906ರಿಂದ ಕಾರ್ಯಾಚರಿಸುತ್ತಿದೆ.
ಮಾಂಸ ದೊರೆಯದಿದ್ದರೆ ಮಳಿಗೆ ಹೇಗೆ ನಡೆಸುವುದು ಎಂದು ಮಳಿಗೆಯ ಮಾಲಕ ಮುಹಮ್ಮದ್ ಉಸ್ಮಾನ್ ಪ್ರಶ್ನಿಸುತ್ತಾರೆ. ಎತ್ತಿನ ಮಾಂಸ ಪೂರೈಸುವ ಅಕ್ಬರಿ ಗೇಟ್ ಅಂಗಡಿ ಮುಚ್ಚಿದ್ದರೆ, ಕೋಳಿ ಮಾಂಸ ಮತ್ತು ಮಟನ್ ಪೂರೈಸುವ ಅಮೀನಾಬಾದಿನ ಇನ್ನೊಂದು ಅಂಗಡಿಯೂ ಮುಚ್ಚಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೊರತೆ ಎದುರಾಗಬಹುದು,’’ ಎಂದು ಉಸ್ಮಾನ್ ಆತಂಕ ವ್ಯಕ್ತಪಡಿಸುತ್ತಾರೆ.
ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿ ಅಕ್ರಮ ಗೋ ಸಾಗಾಟ ನಿಲ್ಲಿಸಿ ಹೈನುಗಾರಿಕೆಯನ್ನು ಉತ್ತೇಜಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು.
ಈಗ ಮುಖ್ಯಮಂತ್ರಿಯಾಗಿರುವ ಆದಿತ್ಯನಾಥ್ 2002ರಲ್ಲಿಯೇ ಅಕ್ರಮ ಕಸಾಯಿಖಾನೆಗಳ ವಿರುದ್ಧ ಅಭಿಯಾನ ಆರಂಭಿಸಿದ್ದರು.
ಇಲ್ಲಿಯ ತನಕ ನಗರದಲ್ಲಿ 9 ಮಾಂಸದಂಗಡಿಗಳನ್ನು ಮುಚ್ಚಲಾಗಿದ್ದರೆ ಸ್ಥಳೀಯಾಡಳಿತದ ಪ್ರಕಾರ ನಗರದಲ್ಲಿ ಕನಿಷ್ಠ 200ರಿಂದ 250 ಅಕ್ರಮ ಮಾಂಸದಂಗಡಿಗಳಿವೆ.
ಬುಧವಾರದಂದು ಬಿಎಸ್ಪಿ ಶಾಸಕರ ಕುಟುಂಬವೊಂದಕ್ಕೆ ಸೇರಿದ ಮೂರು ಎತ್ತಿನ ಮಾಂಸ ಸಂಸ್ಕರಣಾ ಘಟಕಗಳಿಗೆ ಮೀರತ್ ನಗರದಲ್ಲಿದ್ರೆ ಮಾಡಲಾಗಿದೆ. ತಮ್ಮ ಬಳಿ ಎಲ್ಲಾ ಅನುಮತಿಗಳೂ ಇವೆ ಎಂದು ಮಾಲಕರು ತಿಳಿಸಿದ್ದರೂ ಪರವಾನಗಿ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರದಂದು ನಡೆದ ಇನ್ನೊಂದು ದಾಳಿಯಲ್ಲಿ ವಾರಣಾಸಿಯಲ್ಲಿರುವ ಕಸಾಯಿಖಾನೆಯೊಮದನ್ನು ಮುಚ್ಚಲಾಗಿದೆ. ಗಾಝಿಯಾಬಾದ್ ನಲ್ಲಿ 10 ಮಾಂಸದಂಗಡಿಗಳನ್ನು ಮುಚ್ಚಿದರೆ ಹತ್ತು ಕಸಾಯಿಖಾನೆಗಳು ತಾವಾಗಿಯೇ ದಾಳಿಗೆ ಹೆದರಿ ಮುಚ್ಚಿದ್ದವು.
ಗಾಝಿಯಾಬಾದ್ ಪ್ರದೇಶದಲ್ಲಿ ಮಾರ್ಚ್ 15ರಿಂದ 34 ಅಕ್ರಮ ಮಾಂಸದಂಗಡಿಗಳು ಹಾಗೂ ಕಸಾಯಿಖಾನೆಗಳನ್ನು ಮುಚ್ಚಲಾಗಿದೆ. ಈ ಪ್ರದೇಶದಲ್ಲಿ 210 ಅಕ್ರಮ ಮಾಂಸದಂಗಡಿಗಳಿವೆಯೆಂದು ಅಧಿಕಾರಿಗಳು ಹೇಳುತ್ತಾರೆ.
ಮಂಗಳವಾರದಂದು ಹಥ್ರಾಸ್ ನಲ್ಲಿ ಮುಸ್ಲಿಮ್ ಸಮುದಾಯದ ಒಡೆತನದಲ್ಲಿರುವ ಮೂರು ಮಾಂಸದಂಗಡಿಗಳಿಗೆ ಗುಂಪೊಂದು ಬೆಂಕಿ ಹಚ್ಚಿತ್ತು.
ರಾಜಧಾನಿಯಲ್ಲಿ ಈಗಾಗಲೇ 2013 ಹಾಗೂ 2015ರ ನಡುವೆ ನಾಲ್ಕು ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲಾಗಿದೆ.