ಕಾಶ್ಮೀರ: ಎನ್ಕೌಂಟರ್ ಸಂದರ್ಭ ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರ ಘರ್ಷಣೆ,ಇಬ್ಬರ ಸಾವು
ಶ್ರೀನಗರ,ಮಾ.28: ಜಮ್ಮು- ಕಾಶ್ಮೀರದ ಬಡಗಾಂವ್ ಜಿಲ್ಲೆಯ ಚಾದೂರಾ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗದ ಸಂದರ್ಭ ಕಲ್ಲು ತೂರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ವಿರುದ್ಧ ಯೋಧರ ಕಾರ್ಯಾಚರಣೆಯಲ್ಲಿ ಇಬ್ಬರು ಸ್ಥಳೀಯ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇತರ 17 ಜನರು ಗಾಯಗೊಂಡಿದ್ದಾರೆ.
ಭಯೋತ್ಪಾದಕರು ಬಚ್ಚಿಟ್ಟುಕೊಂಡಿರುವ ಮಾಹಿತಿ ಪಡೆದಿದ್ದ ಭದ್ರತಾ ಸಿಬ್ಬಂದಿಗಳು ಬೆಳ್ಳಂಬೆಳಿಗ್ಗೆ ಚಾದೂರಾದ ದರ್ಬಾಗ್ ಪ್ರದೇಶವನ್ನು ನಿರ್ಬಂಧಿಸಿ ಶೋಧ ಕಾರ್ಯಾ ಚರಣೆಯನ್ನು ಆರಂಭಿಸಿದ್ದರು. ಈ ವೇಳೆ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದು ಗುಂಡಿನ ಕಾಳಗಕ್ಕೆ ನಾಂದಿ ಹಾಡಿತ್ತು. ಈ ಸಂದರ್ಭ ಅಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಸ್ಥಳೀಯ ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟದಲ್ಲಿ ತೊಡಗಿದ್ದರು. ಭದ್ರತಾ ಪಡೆಗಳು ತಮ್ಮ ರಕ್ಷಣೆಗಾಗಿ ಪ್ರತಿದಾಳಿ ನಡೆಸಿದಾಗ ಇಬ್ಬರು ಪ್ರತಿಭಟನಾಕಾರರು ಗುಂಡೇಟಿಗೆ ಬಲಿಯಾಗಿದ್ದಾರೆ. ಇತರ 17 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.