ಮುಂಬೈ ಸಮುದ್ರದಲ್ಲಿ ಅತಂತ್ರರಾಗಿದ್ದ ನಾಲ್ವರ ರಕ್ಷಣೆ
ಮುಂಬೈ,ಎ.18: ಸೋಮವಾರ ರಾತ್ರಿ ಸಮುದ್ರದಲ್ಲಿ ಇಳಿತವಿದ್ದ ಸಂದರ್ಭ ರಾಜಭವನದಾಚೆ ಕಡಲಲ್ಲಿ ಟಗ್ಬೋಟ್ ‘ಸೋನಿಕಾ ’ದಲ್ಲಿ ಸಿಕ್ಕಿ ಬಿದ್ದಿದ್ದ ನಾಲ್ವರನ್ನು ನೌಕಾಪಡೆಯ ಸೀಕಿಂಗ್ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.
ಉದ್ದೇಶಿತ ಶಿವಾಜಿ ಸ್ಮಾರಕವು ತಲೆಯೆತ್ತಲಿರುವ ತಾಣದ ಸಮೀಪ ಈ ಘಟನೆ ನಡೆದಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದರು. ಟಗ್ಬೋಟ್ ಸೋನಿಕಾ ಮುಂಬೈ ಬಂದರು ವ್ಯಾಪ್ತಿಯಲ್ಲಿ ಹಡಗುಗಳಲ್ಲಿ ಸಿಕ್ಕಿಹಾಕಿಕೊಂಡ ಸಿಬ್ಬಂದಿಗಳಿಗೆ ನೆರವಾಗುವ ಕರ್ತವ್ಯ ನಿರ್ವಹಿಸುತ್ತಿದೆ.
ಸೋಮವಾರ ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ಸಮುದ್ರದಲ್ಲಿ ಇಳಿತವಿದ್ದ ಕಾರಣ ಬಂದರಿಗೆ ವಾಪಸಗುತ್ತಿದ್ದ ಟಗ್ಬೋಟ್ ಮುಂದಕ್ಕೆ ಚಲಿಸಲು ಸಾಧ್ಯವಾಗದೆ ನಾಲ್ವರು ಸಿಬ್ಬಂದಿಗಳು ಅತಂತ್ರರಾಗಿದ್ದರು. ಘಟನೆಯ ಬಗ್ಗೆ ಮಾಹಿಮ್ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, 15 ನಿಮಿಷಗಳಲ್ಲಿ ಅವರು ಸ್ಥಳವನ್ನು ತಲುಪಿದ್ದರು. ಟಗ್ಬೋಟ್ನಲ್ಲಿದ್ದ ಸಿಬ್ಬಂದಿಗಳಿಗೆ ನೆರವಾಗಲು ಪ್ರಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ.
ಮುಂಬೈ ಪೊಲೀಸರ ಕೋರಿಕೆಯಂತೆ ಶಿಕ್ರಾ ನೇವಲ್ ಏರ್ ಸ್ಟೇಷನ್ನಲ್ಲಿದ್ದ ನೌಕಾಪಡೆಯ ಸೀಕಿಂಗ್ ಹೆಲಿಕಾಪ್ಟರ್ನ್ನು ಮುಳುಗುಗಾರರ ಸಹಿತ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮಧ್ಯರಾತ್ರಿಯ ವೇಳೆಗೆ ಟಗ್ಬೋಟ್ನ ಎಲ್ಲ ನಾಲ್ಕೂ ಸಿಬ್ಬಂದಿಗಳನ್ನು ರಕ್ಷಿಸಲಾಯಿತು.