ಉಸ್ಮಾನಿಯ ವಿವಿಗೆ ನೂರರ ಸಂಭ್ರಮ
ಹೈದರಾಬಾದ್,ಎ. 25: ದೇಶದ ಆದ್ಯಕಾಲದ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಹೈದರಾಬಾದ್ನ ಉಸ್ಮಾನಿಯ ವಿಶ್ವವಿದ್ಯಾನಿಲಯದ ನೂರನೆ ವರ್ಷ ಆಚರಣೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬುಧವಾರ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಂದ್ರಶೇಖರರಾವ್, ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಭಾಗವಹಿಸಲಿದ್ದಾರೆ ಎಂದು ವೈಸ್ ಚಾನ್ಸಲರ್ ಪ್ರೊ. ಎಸ್. ರಾಮಚಂದ್ರನ್ ತಿಳಿಸಿದ್ದಾರೆ.
ಮೂರುದಿವಸಗಳ ಕಾರ್ಯಕ್ರಮಕ್ಕಾಗಿ ಕ್ಯಾಂಪಸ್ನಲ್ಲಿ ಆರ್ಟ್ಸ್ ಕಾಲೇಜು ಕಟ್ಟಡದ ಸಮೀಪ ವಿದ್ಯಾರ್ಥಿಗಳು, ಪೂರ್ವ ವಿದ್ಯಾರ್ಥಿಗಳು, ಅಧ್ಯಾಪಕರು ಸಹಿತ 15,000 ಮಂದಿ ಕುಳಿತುಕೊಳ್ಳಬಹುದಾದ ಬೃಹತ್ ವೇದಿಕೆಯನ್ನು ಸಜ್ಜುಪಡಿಸಲಾಗಿದೆ. ಹಲವಾರು ಶೈಕ್ಷಣಿಕ ವ್ಯಕ್ತಿಗಳು ಕಾರ್ಯಕ್ರಮದಲ್ಲಿಪಾಳ್ಗೊಳ್ಳಲಿರುವ ಕಾರ್ಯಕ್ರಮಕ್ಕೆ ಸಾವಿರಾರು ಸಿಸಿಟಿವಿ ಕ್ಯಾಮರಾಗಳ ಸಹಿತ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆ.
1917ರಲ್ಲಿ ಹೈದರಾಬಾದ್ ನಿಝಾಮ ಆಗಿದ್ದ ಮಿರ್ ಉಸ್ಮಾನ್ ಅಲಿ ಖಾನ್ರ ನೇತೃತ್ವದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿತ್ತು. 1000 ಮಂದಿ ವಿಐಪಿಗಳು, 2000 ಮಂದಿ ಅಲುಮ್ನಿ ಸದಸ್ಯರು, ಬೋಧಕ ಸದಸ್ಯರು, ಸಿಬ್ಬಂದಿಗಳು ಸೇರಿ 3,000 ಮಂದಿ ಹಾಗೂ 10,000 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.