ಮಧ್ಯಂತರ ಚುನಾವಣೆ ಕುರಿತ ವದಂತಿ ತಳ್ಳಿಹಾಕಿದ ನಾಯ್ಡು
ಹೈದರಾಬಾದ್,ಎ.30: ಮಧ್ಯಂತರ ಚುನಾವಣೆಗಳ ವದಂತಿಗಳನ್ನು ಆಧಾರರಹಿತ ಎಂದು ರವಿವಾರ ಇಲ್ಲಿ ತಳ್ಳಿಹಾಕಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, 2019ರಲ್ಲಿ ಚುನಾವಣೆಗಳನ್ನು ಎದುರಿಸುವ ಮುನ್ನ ಸರಕಾರವು ಐದು ವರ್ಷಗಳ ತನ್ನ ಪೂರ್ಣ ಅಧಿಕಾರಾವಧಿಯನ್ನು ಮುಗಿಸಲಿದೆ ಎಂದು ಹೇಳಿದರು.
ತನ್ನ ಪ್ರಕಾರ ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಮಧ್ಯಂತರ ಚುನಾವಣೆಯ ವದಂತಿಗೆ ಯಾವುದೇ ಆಧಾರವಿಲ್ಲ. ಇಂತಹ ವದಂತಿಗಳು ಎಲ್ಲಿಂದ ಹುಟ್ಟುತ್ತವೋ ತನಗೆ ಗೊತ್ತಿಲ್ಲ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಹ 2019ರ ಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸಿ ಎಂದು ಕಾರ್ಯಕರ್ತರನ್ನು ಮತ್ತು ಸರಕಾರಕ್ಕೆ ಕರೆ ನೀಡುತ್ತಿದ್ದಾರೆ. ಅದು ಪಕ್ಷದ ಗುರಿಯಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ನಾಯ್ಡು ನುಡಿದರು.
ಪರಿಶಿಷ್ಟ ಜಾತಿಗಳ ವರ್ಗೀಕರಣ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷವು ಈ ಬಗ್ಗೆ ಒಲವು ಹೊಂದಿದೆ. ಕಾಯ್ದೆಯೊಂದನ್ನು ತರುವ ಮುನ್ನ ಈ ವಿಷಯ ಕುರಿತು ರಾಜ್ಯಗಳು ಮತ್ತು ಕೇಂದ್ರದ ನಡುವೆ ಚರ್ಚೆಯ ಅಗತ್ಯವಿದೆ ಎಂದು ತಿಳಿಸಿದರು.