ಪತಂಜಲಿ ಪ್ರಸಾಧನ ವಸ್ತುಗಳ ಮೇಲೆ ಓಂ ಚಿಹ್ನೆ ನಿರ್ಬಂಧಕ್ಕೆ ಹೈಕೋರ್ಟ್ ನಕಾರ
ಅಲ್ಲಹಾಬಾದ್, ಮೇ 5: ರಾಮ್ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಉತ್ಪಾದಿಸುವ ಪ್ರಸಾಧನ ಸಾಮಾಗ್ರಿಗಳ ಮೇಲೆ ಓಂ ಚಿಹ್ನೆ ಹಾಕುವುದಕ್ಕೆ ತಡೆಯೊಡ್ಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲ್ಲಹಾಬಾದ್ ಹೈಕೋರ್ಟ್ ತಳ್ಳಿಹಾಕಿದೆ.
ಸಾಮಾಜಿಕ ಕಾರ್ಯಕರ್ತ ಆರ್.ಎಸ್.ಕುಶ್ವಾಹ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ವಿ.ಕೆ.ಶುಕ್ಲ ಮತ್ತು ಎಂ.ಸಿ.ತ್ರಿಪಾಠಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸಾರ್ವಜನಿಕರಿಗೆ ಉಪಯೋಗವಾಗುವ ಬದಲು, ಪ್ರಚಾರ ಪಡೆಯುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿತು.
ಓಂ ಚಿಹ್ನೆಯು ಹಿಂದು, ಬೌದ್ಧ, ಜೈನ ಮತ್ತು ಸಿಖ್ ಧರ್ಮೀಯರಿಗೆ ಪವಿತ್ರ ಚಿಹ್ನೆಯಾಗಿದೆ. ಜನರ ಧಾರ್ಮಿಕ ಭಾವನೆಗೆ ಘಾಸಿಯಾಗುವ ರೀತಿಯಲ್ಲಿ ಧಾರ್ಮಿಕ ಚಿಹ್ನೆಯನ್ನು ಬಳಸದಂತೆ ಕಾನೂನಿನಲ್ಲಿ ತಿಳಿಸಲಾಗಿದೆ. ಪತಂಜಲಿ ಪ್ರಸಾಧನ ಉತ್ಪನ್ನಗಳಲ್ಲಿ ಓಂ ಚಿಹ್ನೆ ಬಳಸುವುದರಿಂದ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ. ಆದ್ದರಿಂದ ಇದನ್ನು ನಿರ್ಬಂಧಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.