ಗುರುವಾಯೂರು ದೇವಸ್ಥಾನಕ್ಕೆ ಬೆದರಿಕೆ ಕರೆ
ಗುರುವಾಯೂರು,ಮೇ 20: ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನವನ್ನು ‘ನಾಶ’ಗೊಳಿಸುವುದಾಗಿ ಬೆದರಿಕೆ ಕರೆಯೊಂದು ಶನಿವಾರ ಬಂದಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಅತ್ಯಂತ ಬಿಗು ಭದ್ರತೆಯನ್ನೊದಗಿಸಲಾಗಿದೆ. ಕೇರಳದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ ಗುರುವಾಯೂರಿಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
ಶನಿವಾರ ಬೆಳಿಗ್ಗೆ ದೇವಸ್ಥಾನದ ಅಧಿಕಾರಿಗಳಿಗೆ ದೂರವಾಣಿ ಕರೆಯನ್ನು ಮಾಡಿದ ಅನಾಮಧೇಯ ವ್ಯಕ್ತಿಯೋರ್ವ ದೇವಸ್ಥಾನದ ಆಡಳಿತದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ಬಳಿಕ ಈ ಬೆದರಿಕೆಯನ್ನೊಡ್ಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಕರೆ ವಿವರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬಾಂಬ್ ಪತ್ತೆ ದಳವು ವ್ಯಾಪಕ ತಪಾಸಣೆಗಳನ್ನು ಕೈಗೊಂಡಿದೆ.
Next Story