ದೇಶದ್ರೋಹ ಪ್ರಕರಣ:ವೈಕೋಗೆ ಜಾಮೀನು
ಚೆನ್ನೈ,ಮೇ 24: 2009ರ ದೇಶದ್ರೋಹ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ ಎ.3ರಿಂದ ಜೈಲಿನಲ್ಲಿರುವ ಎಂಡಿಎಂಕೆ ವರಿಷ್ಠ ವೈಕೋ ಅವರಿಗೆ ಚೆನ್ನೈನ ನ್ಯಾಯಾಲಯ ವೊಂದು ಬುಧವಾರ ಜಾಮೀನು ಮಂಜೂರು ಮಾಡಿದೆ.
2009ರಲ್ಲಿ ತನ್ನ ಪುಸ್ತಕವೊಂದರ ಬಿಡುಗಡೆ ಸಂದರ್ಭ ಮಾಡಿದ್ದ ಭಾಷಣಕ್ಕಾಗಿ ವೈಕೋ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದರು. 2010ರಲ್ಲಿ ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತಾದರೂ ವಿಚಾರಣೆ ಇನ್ನಷ್ಟೇ ಆರಂಭ ಗೊಳ್ಳಬೇಕಿದೆ.
ಈ ವರ್ಷದ ಎ.3ರಂದು ಮಹಾನಗರ ನ್ಯಾಯಾಧೀಶ ಎಸ್.ಗೋಪಿನಾಥನ್ ಅವರ ಎದುರು ಹಾಜರಾಗಿದ್ದ ವೈಕೋ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ್ದರು. ಜಾಮೀನು ಬಿಡುಗಡೆ ಮಾಡುವುದಾಗಿ ನ್ಯಾಯಾಧೀಶರು ಹೇಳಿದ್ದರಾದರೂ ವೈಕೋ ಜಾಮೀನು ಕೋರಿ ಅರ್ಜಿ ಸಲ್ಲಿಸಲು ನಿರಾಕರಿಸಿದ್ದರು. ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ಜೈಲಿಗೆ ರವಾನಿಸಲಾಗಿತ್ತು.
ವೈಕೋ ಮಂಗಳವಾರ ಜಾಮೀನು ಕೋರಿ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯು ಬುಧವಾರ ವಿಚಾರಣೆಗೆ ಬಂದಾಗ ನ್ಯಾ.ಪುರುಷೋತ್ತಮನ್ ಅವರು ಷರತ್ತುರಹಿತ ಜಾಮೀನನ್ನು ಮಂಜೂರು ಮಾಡಿದರು.