ಪ್ರಿಯತಮನ ಹುಡುಕಲು ಬಂದು ನಕ್ಸಲೈಟ್ ನಾಯಕಿಯಾದಳು!
ಬದಿಯಡ್ಕ, ಮೇ 28: ಪ್ರೇಮಿಯನ್ನು ಹುಡುಕಿಕೊಂಡು ಬಂದಿದ್ದ ಯುವತಿಯೊಬ್ಬಳ ಸಂಶಯಾಸ್ಪದ ನಡೆ ಊರವರಲ್ಲಿ ಭೀತಿ ಸೃಷ್ಟಿಸಿದ್ದು, ಆಕೆ ನಕ್ಸಲೈಟ್ ಎಂಬ ಸಂಶಯದಲ್ಲಿ ಗುಪ್ತಚರ ಅಧಿಕಾರಿಗಳು ಆಗಮಿಸಿದ ಘಟನೆ ಕಾಸರಗೋಡು ಸಮೀಪದ ಬದಿಯಡ್ಕದಲ್ಲಿ ನಡೆದಿದೆ.
ಬದಿಯಡ್ಕ ಮೂಕ್ಕಾಂಪಾರಕ್ಕೆ ಬಂದಿದ್ದ ಯುವತಿ ಸಂಶಯಾಸ್ಪದ ರೀತಿಯಲ್ಲಿ ಅತ್ತಿತ್ತ ಅಡ್ಡಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಈ ಬಗ್ಗೆ ಪ್ರಶ್ನಿಸಿದ್ದಾರೆ. ತನ್ನ ಪ್ರಿಯಕರನನ್ನು ಹುಡುಕಿಕೊಂಡು ಬಂದಿದ್ದೇನೆ ಎಂದು ಪೊಲೀಸರಿಗೆ ಯುವತಿ ತಿಳಿಸಿದ್ದಾಳೆ. ಆದರೆ ಈಕೆ ನಕ್ಸಲೈಟ್ ಎನ್ನುವ ವದಂತಿ ಊರಿನಲ್ಲಿ ಹಬ್ಬಿದ್ದರಿಂದ ಅಲ್ಲಿಗೆ ಇಂಟಲಿಜೆನ್ಸ್ ಅಧಿಕಾರಿಗಳು ಧಾವಿಸಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಯುವತಿ ಮಾತನಾಡಿದ್ದಾಳೆ. ಯುವತಿ ತನ್ನ ಹೆಸರು ಮಂಜುಳಾ ಎಂದು ಹೇಳಿದ್ದರಿಂದ ಆಕೆಯನ್ನು ನಕ್ಸಲೈಟ್ ನಾಯಕಿ ಮಂಜುಳಾ ಎಂದು ಊರವರು ತಿಳಿದು ಈ ಬಗ್ಗೆ ವದಂತಿ ಹಬ್ಬಿದೆ.
ಬದಿಯಡ್ಕ ಬಸ್ಸ್ಟ್ಯಾಂಡ್ನಿಂದ ಕರ್ನಾಟಕ ಪುತ್ತೂರು ಕಡೆಗೆ ಕೆಎಸ್ಸಾರ್ಟಿಸಿ ಬಸ್ನಲ್ಲಿ ಯುವತಿ ತೆರಳಿದ್ದು, ಪೆರ್ಲದಲ್ಲಿ ಯುವತಿಯನ್ನು ಪೊಲೀಸರು ಕೆಳಗಿಳಿಸಿ ವಿಚಾರಿಸಿದ್ದಾರೆ. ತಾನು ಬೆಂಗಳೂರಿನವಳು, ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಯುವತಿ ಹೇಳಿ ತನ್ನ ಪ್ರೇಮಕತೆಯನ್ನು ಬಿಚ್ಚಿಟ್ಟಿದ್ದಳು. ಬದಿಯಡ್ಕದ ಆಕೆಯ ಪ್ರೇಮಿಯ ಕುರಿತು ಪೊಲೀಸರು ವಿಚಾರಿಸಿದಾಗ ಆತ ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳಿದ್ದು ತಿಳಿದು ಬಂದಿತ್ತು. ನಂತರ ಪೊಲೀಸರು ಯುವತಿಯ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿ ಅವಳನ್ನು ಪರವನಡ್ಕದ ಮಹಿಳಾ ಮಂದಿರಕ್ಕೆ ಕಳುಹಿಸಿಕೊಟ್ಟಿದ್ದಾರೆ.