ಪ್ರಾರ್ಥನೆ ಹಕ್ಕಿಗಾಗಿ ಘರ್ಷಣೆ: ಭೋಪಾಲ್ ಉದ್ವಿಗ್ನ
ಭೋಪಾಲ್, ಮೇ 31: ಹಮೀದಿಯಾ ಆಸ್ಪತ್ರೆ ಸಂಕೀರ್ಣದಲ್ಲಿ ಪ್ರಾರ್ಥನೆ ಮಾಡುವ ಹಕ್ಕಿಗೆ ಸಂಬಂಧಿಸಿದಂತೆ ಹಿಂದೂ ಮತ್ತು ಮುಸ್ಲಿಮರ ನಡುವೆ ಉದ್ಭವಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಳೆ ಭೋಪಾಲ್ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಉಭಯ ಗುಂಪುಗಳು ಹಿಂಸಾಚಾರಕ್ಕೆ ಇಳಿದಿದ್ದು, ಕಲ್ಲು ತೂರಾಟ ನಡೆಯಿತು. ಪೀರ್ಗೇಟ್ ಬಳಿ ನಾಲ್ಕು ವಾಹನಗಳನ್ನು ಸುಟ್ಟುಹಾಕಲಾಯಿತು. ಮಂಗಳವಾರ ರಾತ್ರಿ 8:30ರ ಸುಮಾರಿಗೆ ಮುಸ್ಲಿಮರು ರಸ್ತೆ ಬದಿ ಇಫ್ತಾರ್ ಕೂಟಕ್ಕೆ ಸೇರಿದ್ದಾಗ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಆಸ್ಪತ್ರೆ ಸಂಕೀರ್ಣದ ಒಳಗೆ ಇದ್ದ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದರು. ಆಗ ಉಭಯ ಗುಂಪುಗಳ ನಡುವೆ ವಾಗ್ವಾದ, ಘರ್ಷಣೆ ನಡೆಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.
ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಶೆಲ್ ಸಿಡಿಸಿದರು. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಈ ಹಂತದಲ್ಲಿ ಇಲ್ಲಿ ಸಾಕಷ್ಟು ದೊಂಬಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚುವ ಪ್ರಯತ್ನವೂ ನಡೆಯಿತು. ಕಲ್ಲುತೂರಾಟದಿಂದಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು. ರಾತ್ರಿ 10:30ರ ಸುಮಾರಿಗೆ ಮುಸ್ಲಿಮರು ಪಕ್ಕದ ಮಸೀದಿಯಲ್ಲಿ ನಮಾಝ್ ಮಾಡಿ ಅಗಮಿಸುತ್ತಿದ್ದಾಗ ಮತ್ತೆ ಕಲ್ಲುತೂರಾಟ ನಡೆಯಿತು. ಈ ಹಂತದಲ್ಲೂ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ ಎಂದು ಭೋಪಾಲ್ ಎಸ್ಪಿ ಅರವಿಂದ್ ಸಕ್ಸೇನಾ ಹೇಳಿದ್ದಾರೆ.
ಹಮೀದಿಯಾ ಅಸ್ಪತ್ರೆ ಆವರಣದಲ್ಲಿ ಅಗೆಯುವ ವೇಳೆ ಹಳೆಯ ಕಟ್ಟಡದ ಪಳೆಯುಳಿಕೆಗಳು ಸಿಕ್ಕಿದ್ದು, ಮುಸ್ಲಿಂ ಸಮುದಾಯದ ಮಂದಿ, ಇದು ಮಸೀದಿಯ ಅವಶೇಷಗಳು, ಇಲ್ಲಿ ನಮಾಜ್ಗೆ ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಇದು ಮಸೀದಿ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂಬ ಕಾರಣ ನೀಡಿ ಆಡಳಿತ ಇದಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದ ಹಲವು ದಿನಗಳಿಂದ ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಸೋಮವಾರ ಹಿಂದೂ ಸಮುದಾಯದವರು ಆಸ್ಪತ್ರೆ ಅವರಣದ ಒಳಗಿದ್ದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಮುಂದಾದರು. ಹೊಸದಾಗಿ ಪತ್ತೆಯಾದ ಸ್ತಂಭದ ಪಕ್ಕದಲ್ಲೇ ಈ ದೇವಾಲಯ ಇದ್ದು, ಇಲ್ಲಿ ಪ್ರಾರ್ಥನೆ ಸಲ್ಲಿಸಲು ಅಧಿಕಾರಿಗಳು ಅವಕಾಶ ನೀಡಿರಲಿಲ್ಲ.