ಭಾರೀ ಮಳೆಯಿಂದ ಭೂಕುಸಿತ: ತಾಯಿ, ಮಕ್ಕಳು ಮೃತ್ಯು
ತ್ರಿಪುರ, ಜೂ.4: ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟು, ಒಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತ್ರಿಪುರಾದ ಧಲಾಯ್ ಜಿಲ್ಲೆಯಲ್ಲಿ ನಡೆದಿದೆ. ಬುಡಕಟ್ಟು ಕುಟುಂಬವೊಂದರ ಮನೆಯ ಮೇಲೆ ಬೆಟ್ಟದ ಭಾರೀ ಪ್ರಮಾಣದ ಮಣ್ಣು ಕುಸಿದು ಬಿದ್ದಿದ್ದು, ಓರ್ವ ಮಹಿಳೆ, ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ, ಮನೆಯ ಯಜಮಾನ ರೂಟಿ ದೆಬ್ಬಾರಮ್ಮ ಎಂಬವರನ್ನು ರಕ್ಷಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಆದರೆ ಮಹಿಳೆ ಕಾಜಲ್ ಕನ್ಯಾ ಹಾಗೂ ಆಕೆಯ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. “ಭಾರೀ ಮಳೆ ಸುರಿಯುತ್ತಿದ್ದ ಪರಿಣಾಮ ಮಣ್ಣು ಕುಸಿದು ಮನೆಯ ಮೇಲೆ ಬಿದ್ದಿದೆ. ಮಾಹಿತಿ ಲಭಿಸಿದ ತಕ್ಷಣ ನಾವು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡೆವು. ಮೂವರು ಮೃತಪಟ್ಟಿದ್ದು, ಮನೆಯ ಯಜಮಾನರನ್ನು ರಕ್ಷಿಸಲಾಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ಚಂದನ್ ಸಾಹ ಮಾಹಿತಿ ನೀಡಿದ್ದಾರೆ.
Next Story